ಸಾಲಕ್ಕೆ ಹೆದರಿ ನೇಣು ಬಿಗಿದುಕೊಂಡು ಹುಣಸೂರು ರೈತ ಆತ್ಮಹತ್ಯೆ
ಮೈಸೂರು, ಆಗಸ್ಟ್ 19: ರೈತರ ಆತ್ಮಹತ್ಯೆ ಪ್ರಕರಣಗಳು ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಯಾವ ಸರ್ಕಾರ ಬಂದರೂ ಆತ್ಮಹತ್ಯೆ ಪ್ರಕರಣಗಳಿಗೆ ತಡೆಯೊಡ್ಡುವ ಕೆಲಸವಾಗದ ಕಾರಣದಿಂದಾಗಿ ಬೆಳೆ ಬೆಳೆಯಲು ಸಾಲ ಮಾಡಿಕೊಳ್ಳುವ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಬೇಸರದ ಸಂಗತಿ.
ಅದರಲ್ಲೂ ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ರೈತರು ಮೇಲಿಂದ ಮೇಲೆ ಆತ್ಮಹತ್ಯೆಗೆ ಶರಣಾಗುತ್ತಲೇ ಇರುವುದು ಭಯಪಡುವಂತಾಗಿದೆ. ಇದೀಗ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ನಿವಾಸಿ ಕೃಷ್ಣಯ್ಯ (70) ಎಂಬ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಪ್ರವಾಹದಲ್ಲಿ ಬೆಳೆ ಕಳೆದುಕೊಂಡಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ
ಇವರು ಜಮೀನು ಹೊಂದಿದ್ದು, ಅದರಲ್ಲಿ ತಂಬಾಕು ಬೆಳೆಯುವ ಸಲುವಾಗಿ ಹುಣಸೂರು ಪಟ್ಟಣದ ಐ.ಓ.ಬಿ ಬ್ಯಾಂಕಿನಲ್ಲಿ 93 ಸಾವಿರ ಬೆಳೆ ಸಾಲ ಮಾಡಿದ್ದರು. ಪತ್ನಿ ಹೆಸರಲ್ಲಿ ಖಾಸಗಿ ಸಂಸ್ಥೆ ಮತ್ತು ಮಹಿಳಾ ಸಂಘಗಳಲ್ಲಿ 90 ಸಾವಿರ ಸಾಲ ಮಾಡಿದ್ದರು. ಆದರೆ ಈ ಬಾರಿ ಸುರಿದ ವಿಪರೀತ ಮಳೆಯಿಂದಾಗಿ ತಂಬಾಕು ಹಾಗೂ ಇನ್ನಿತರ ಬೆಳೆಗಳು ನೆಲಕಚ್ಚಿದ್ದರಿಂದ ಸಾಲ ತೀರಿಸುವ ಮಾರ್ಗ ಕಾಣದೆ, ಅಲ್ಲದೆ ಸಾಲಗಾರರ ಕಾಟ ಹೆಚ್ಚಾದ ಕಾರಣ ತಮ್ಮ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಮೀನಿಗೆ ಹೋದವರು ಮರಳಿ ಬಾರದ್ದರಿಂದ ಮನೆಯವರು ಜಮೀನಿಗೆ ಹುಡುಕಿಕೊಂಡು ಹೋದ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನಾಲ್ಕು ದಶಕದಿಂದ ವಿದ್ಯುತ್ ಸಂಪರ್ಕ ನೀಡದ ಸರಕಾರ; ರೈತ ಆತ್ಮಹತ್ಯೆ ಯತ್ನ
ಮೃತ ರೈತ ಕೃಷ್ಣಯ್ಯ ಪತ್ನಿ ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ. ಈ ಸಂಬಂಧ ಪುತ್ರ ಪುಟ್ಟರಾಜು ನೀಡಿದ ದೂರಿನ ಮೇರೆಗೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.