ಬಜೆಟ್ ಪೂರ್ವಭಾವಿ ಸಭೆಯಿಂದ ದೂರ ಉಳಿದ ರೈತ ಸಂಘ, ಹಸಿರು ಸೇನೆ
ಮೈಸೂರು, ಜನವರಿ 25: ರಾಜ್ಯ ಸರ್ಕಾರವು ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಕರೆದಿದ್ದ ರೈತರ ಸಭೆಯಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೂರ ಉಳಿದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಳವಳಿ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದಲ್ಲದೆ, ವ್ಯಂಗ್ಯವಾಗಿ ಮಾತನಾಡಿದ್ದಾರೆ. ಈಗ ಕರೆದಿರುವ ಸಭೆಯು ವಾಡಿಕೆಯ ಸಭೆ ಆಗಿರುವುದರಿಂದ ಸಂಘದ ಮುಖಂಡರು ಹಾಜರಾಗುತ್ತಿಲ್ಲ. ಸಂಘದ ಸಲಹೆ ಸೂಚನೆಗಳನ್ನು ಪತ್ರದ ಮೂಲಕ ತಿಳಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ರೈತ ಸಂಘದ ಒಂದೂವರೆ ಲಕ್ಷ ಮತಗಳು ಮೈತ್ರಿಗಾ, ಬಿಜೆಪಿಗಾ?
ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಕೃಷಿಗೆ ಸಂಬಂಧಿಸಿದ ದೀರ್ಘಾವಧಿ, ಮಧ್ಯಮಾವಧಿ, ಯಂತ್ರೋಪಕರಣಗಳ ಮೇಲೆ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲವನ್ನು ಬಡ್ಡಿರಹಿತವಾಗಿ ನೀಡಬೇಕು. ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಎತ್ತಿನಗಾಡಿ ಸಾಲ, ಕುರಿ, ಕೋಳಿ, ಎಮ್ಮೆ ಸಾಲಗಳನ್ನೂ ಮನ್ನಾ ಮಾಡಬೇಕು. ಸಮಗ್ರ ಗ್ರಾಮೀಣ ಉದ್ಯೋಗ ಭರವಸೆ ನೀತಿಯನ್ನು ರೂಪಿಸಬೇಕು. ರೈತರ ಉತ್ಪನ್ನಗಳಿಗೆ ಲಾಭ ಸಿಗುವಂತಹ ಮಾರುಕಟ್ಟೆ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬಿನ ಬಾಕಿಯನ್ನು ಕೂಡಲೇ ಪಾವತಿಸಬೇಕು. ಬೆಳೆಗಾರರಿಗೆ ಸಹಾಯಧನ ನೀಡಬೇಕು. ಮಂಡ್ಯ ಜಿಲ್ಲೆಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು. ಪಾಂಡವಪುರ ಹಾಗೂ ಚುಂಚನಕಟ್ಟೆ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಬಾರದು. ಕೆಆರ್ಎಸ್ ಬಳಿ ಡಿಸ್ನಿಲ್ಯಾಂಡ್ ಯೋಜನೆಯನ್ನು ಕೈಬಿಡಬೇಕು. ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಜಲಾಶಯಕ್ಕೆ ನೀರು ತುಂಬಿಸಲು, ಕಬಿನಿ ಹಿನ್ನೀರಿಗೆ ಅಳವಡಿಸಿರುವ ಪೈಪ್ಲೈನ್ ಅನ್ನು ವಿಸ್ತರಿಸಬೇಕು. ರೈತ ಸಂಘದ ಹೋರಾಟಗಾರರ ಮೇಲೆ ಹೂಡಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಫೆಬ್ರವರಿ 8ರಂದು ರಾಜ್ಯ ಬಜೆಟ್: ಕುಮಾರಸ್ವಾಮಿ ಘೋಷಣೆ
ಮೈಸೂರು ವಿಶ್ವವಿದ್ಯಾಲಯದಲ್ಲಿ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎನ್.ಡಿ.ಸುಂದರೇಶ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.