ವಿಡಿಯೋ; ದಸರಾ ಮುಕ್ತಾಯ; ಗಜಪಡೆಗೆ ಮೈಸೂರಲ್ಲಿ ಬೀಳ್ಕೊಡುಗೆ
ಮೈಸೂರು, ಅಕ್ಟೋಬರ್ 17; ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗಜಪಡೆಯ ಎಲ್ಲಾ ಆನೆಗಳು ಭಾನುವಾರ ಕಾಡಿನತ್ತ ಸಾಗಿದವು.
ಅಕ್ಟೋಬರ್ 15ರಂದು ನಡೆದ ದಸರಾ ಜಂಬೂಸವಾರಿ ಮೆರವಣಿಗೆಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದ 'ಅಭಿಮನ್ಯು' ಸಾರಥ್ಯದ ಗಜಪಡೆಗೆ ಪ್ರೀತಿಯ ಬೀಳ್ಕೊಡುಗೆಯನ್ನು ಭಾನುವಾರ ನೀಡಲಾಯಿತು.
ಮೈಸೂರು ಅರಮನೆ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದಸರಾ ಆನೆಗಳಿಗೆ ಜಿಲ್ಲಾಡಳಿತದಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. ಕಾಡಿನತ್ತ ಹೊರಟ ಗಜಪಡೆಗೆ ಮಾವುತರು ಹಾಗೂ ಕಾವಾಡಿಗಳು ಮುಂಜಾನೆಯೇ ಸ್ನಾನ ಮಾಡಿಸಿ ಸಿದ್ಧಗೊಳಿಸಿದ್ದರು.
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಬಂದ ಜಂಬೂಸವಾರಿ ಉತ್ಸವ ಮೂರ್ತಿ
ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ, ಆನೆಗಳು ಸುರಕ್ಷಿತವಾಗಿ ಸ್ವಸ್ಥಾನ ತಲುಪುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮದವೇರಿದ ಕಾರಣ ದಸರಾ ಚಟುವಟಿಕೆಗಳಿಂದ ದೂರ ಉಳಿದಿದ್ದ 'ವಿಕ್ರಮ' ಸೇರಿದಂತೆ ಎಲ್ಲಾ ಆನೆಗಳು ಪೂಜೆಯಲ್ಲಿ ಪಾಲ್ಗೊಂಡಿದ್ದವು.
ಶ್ರೀರಂಗಪಟ್ಟಣ ದಸರಾದಲ್ಲಿ ಪಟಾಕಿ ಸದ್ದಿಗೆ ಬೆದರಿ ತಿರುಗಿಬಿದ್ದ ಆನೆ; ದಿಕ್ಕಾಪಾಲಾದ ಜನ
ಪೂಜೆ ಸಲ್ಲಿಸಿದ ನಂತರ ಪ್ರತಿ ಆನೆಗಳನ್ನು ಲಾರಿಗೆ ಹತ್ತಿಸಿ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ಅಭಿಮನ್ಯು, ವಿಕ್ರಮ, ಅಶ್ವತ್ಥಮ, ಲಕ್ಷ್ಮೀ, ಚೈತ್ರಾ, ಕಾವೇರಿ ಮತ್ತು ಧನಂಜಯ ಆನೆಗಳು ಈ ಬಾರಿಯ ದಸರಾಗಾಗಿ ಮೈಸೂರಿಗೆ ಆಗಮಿಸಿದ್ದವು.
ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?
ಅರಮನೆ ಬಿಟ್ಟುಹೋಗಲು ಹಿಂದೇಟು; ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ 8 ಆನೆಗಳನ್ನು ಕಾಡಿಗೆ ಕಳುಹಿಸಲಾಯಿತು. ಆದರೆ ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 'ಅಶ್ವತ್ಥಾಮ' ಆನೆ ಅರಮನೆ ಬಿಟ್ಟು ಹೋಗಲು ಹಿಂದೇಟು ಹಾಕಿದ.
ಗಜಪಡೆ ಬೀಳ್ಕೊಡುಗೆ ವೇಳೆ ಲಾರಿ ಹತ್ತಲು 'ಅಶ್ವತ್ಥಾಮ' ಹಿಂದೇಟು ಹಾಕಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಆದರೆ ಸತತ ಪ್ರಯತ್ನದ ಬಳಿಕ ಗಜಪಡೆ ಕ್ಯಾಪ್ಟನ್ 'ಅಭಿಮನ್ಯು' ಸಹಾಯದಿಂದ ಲಾರಿ ಹತ್ತಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದರು.
ಲಾರಿ ಹತ್ತಲು ಹಿಂದೇಟು ಹಾಕಿದ 'ಅಶ್ವತ್ಥಾಮ'ನಿಗೆ ಹಿಂದಿನಿಂದ ತಿವಿದ 'ಅಭಿಮನ್ಯು' ಲಾರಿ ಹತ್ತಿಸುವಲ್ಲಿ ಯಶಸ್ವಿಯಾದ. 'ಅಭಿಮನ್ಯು'ವಿನ ತಿವಿತಕ್ಕೆ ಕಮಕ್ಕಿಮಕ್ಕೆನ್ನದ 'ಅಶ್ವತ್ಥಾಮ' ಲಾರಿಯನ್ನೇರಿ ಕಾಡಿನತ್ತ ಹೊರಟ.
ದಸರಾ ಜಂಬೂಸವಾರಿ ಹಿನ್ನೆಲೆಯಲ್ಲಿ 'ಅಭಿಮನ್ಯು' ಸಾರಥ್ಯದಲ್ಲಿ ಸೆಪ್ಟೆಂಬರ್ 13ರಂದು 8 ಆನೆಗಳು ಕಾಡಿನಿಂದ ಮೈಸೂರಿಗೆ ಬಂದಿದ್ದವು. ಒಂದು ತಿಂಗಳ ಕಾಲ ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಆನೆಗಳು, ತಮ್ಮ ಜವಾಬ್ದಾರಿ ನಿಭಾಯಿಸಿ, ಮೈಸೂರಿಗರಿಗೆ ಹಲವು ನೆನಪುಗಳ ಬುತ್ತಿಯನ್ನು ನೀಡಿ ತಮ್ಮೂರಿನತ್ತ ಹೊರಟವು.
ಶುಕ್ರವಾರ ಜಂಬೂ ಸವಾರಿ; ಶುಕ್ರವಾರ ಮೈಸೂರು ದಸರಾ ಜಂಬೂ ಸವಾರಿ ನಡೆಯಿತು. ಚಿನ್ನದ ಅಂಬಾರಿ ಹೊತ್ತ 'ಅಭಿಮನ್ಯು' ಯಶಸ್ವಿಯಾಗಿ ವಿಜಯದಶಮಿ ಕಾರ್ಯಕ್ರಮಗಳನ್ನು ಮುಗಿಸಿಕೊಟ್ಟಿದ್ದ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿಗೆ ಚಾಲನೆ ಕೊಟ್ಟಿದ್ದರು.
ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ 21 ಬಾರಿ ಕುಶಾಲತೋಪು ಸಿಡಿಸುತ್ತಿದ್ದಂತೆ ಪೊಲೀಸ್ ವಾದ್ಯವೃಂದದ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದರು. ಬಳಿಕ ಜಂಬೂ ಸವಾರಿ ನಡೆಯಿತು. ಕೋವಿಡ್ ಕಾರಣದಿಂದಾಗಿ ಅರಮನೆ ಆವರಣಕ್ಕೆ ಮಾತ್ರ ಜಂಬೂ ಸವಾರಿ ಸೀಮಿತವಾಗಿತ್ತು.
ಪ್ರವಾಸಿ ತಾಣಗಳ ವೀಕ್ಷಣೆ; ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರವಾಸಿಗರ ಅನೂಕೂಲಕ್ಕಾಗಿ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿತ್ತು. ದಸರಾ ಪೂರ್ಣಗೊಂಡರೂ ಅಕ್ಟೋಬರ್ 24ರ ತನಕ ಪ್ಯಾಕೇಜ್ ಮೂಲಕ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಗಿರಿ ದರ್ಶಿನಿ, ಜಲ ದರ್ಶಿನಿ ಮತ್ತು ದೇವ ದರ್ಶಿನಿ ಪ್ಯಾಕೇಜ್ ಮೂಲಕ ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದು.