ವರ್ಲ್ಡ್ ಕಪ್ ಸೆಮಿಫೈನಲ್ ನಲ್ಲಿ ಭಾರತ ಸೋತಿದ್ದಕ್ಕೆ ಟಿವಿ ಒಡೆದು ಹಾಕಿದ ಅಭಿಮಾನಿ
ಮಂಡ್ಯ, ಜುಲೈ 11: ವರ್ಲ್ಡ್ ಕಪ್ನ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದ್ದಕ್ಕೆ ಬೇಸರಗೊಂಡ ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ನಲ್ಲಿದ್ದ ಟಿ.ವಿ.ಯನ್ನು ಒಡೆದುಹಾಕಿದ್ದಾರೆ.
ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಕಾರಣ ಹೇಳಿದ ವಿರಾಟ್ ಕೊಹ್ಲಿ
ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಹೋಟೆಲ್ ಬೆಳ್ಳಿ ಬಿರಿಯಾನಿ ಪ್ಯಾರಡೈಸ್ ಮಾಲೀಕ ಶಂಕರ್ ಟಿ.ವಿ ಒಡೆದುಹಾಕಿದವರು. ಭಾರತ ಈ ಪಂದ್ಯದಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. ಆದರೆ, ಹೀನಾಯವಾಗಿ ಸೋಲು ಅನುಭವಿಸಿತು. ಭಾರತ ತಂಡದ ಆಟಗಾರರು ಕಳಪೆ ಪ್ರದರ್ಶನ ತೋರಿದ್ದಾರೆ. ಇನ್ನುಮುಂದೆ ಕ್ರಿಕೆಟ್ ನೋಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
12ನೇ ಆವೃತ್ತಿಯ ಐಸಿಸಿ ವಿಶ್ವಕಪ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು 18 ರನ್ಗಳಿಂದ ಸೋಲನುಭವಿಸಿತು. ಈ ಮೂಲಕ ಕಿವೀಸ್ ಪಡೆ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ನ 240 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ತಂಡ 49.3 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 221 ರನ್ ಗಳಿಸಿ ಪರಾಭವಗೊಂಡಿತು. ಇದರಿಂದ ಬೇಸರಗೊಂಡ ಅಭಿಮಾನಿ ಟಿ.ವಿ ಒಡೆದು ಹಾಕಿ ಭಾರತ ತಂಡದ ವಿರುದ್ಧ ಆಕ್ರೋಶ ಹೊರಹಾಕಿದರು.