ಮೈಸೂರು ದಸರಾ; ಈ ಬಾರಿ ಜಟ್ಟಿಗಳ ವಜ್ರಮುಷ್ಟಿ ಕಾಳಗವೂ ರದ್ದು
ಮೈಸೂರು, ಅಕ್ಟೋಬರ್ 12: ಕೊರೊನಾ ವೈರಸ್ ಕಾರಣದಿಂದಾಗಿ ಈ ಬಾರಿ ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ದಸರಾ ಕಾರ್ಯಕ್ರಮಗಳನ್ನು ಅರಮನೆಗೆ ಸೀಮಿತಗೊಳಿಸಲಾಗುತ್ತಿದೆ. ಅರಮನೆಯೊಳಗಿನ ಸಾಂಪ್ರದಾಯಿಕ ವಿಧಿ ವಿಧಾನಗಳನ್ನೂ ತೀರಾ ಸರಳಗೊಳಿಸಲಾಗುತ್ತಿದೆ.
ಆದರೆ ನೂರಾರು ವರ್ಷಗಳ ಇತಿಹಾಸವಿರುವ, ದಸರಾ ವೈಶಿಷ್ಟ್ಯಗಳಲ್ಲಿ ಒಂದಾಗಿದ್ದ ವಜ್ರಮುಷ್ಟಿ ಕಾಳಗವನ್ನೂ ಈ ಬಾರಿ ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ನಡೆಯುವ, ಜಟ್ಟಿಗಳ ವಜ್ರಮುಷ್ಟಿ ಕಾಳಗವನ್ನು ನಡೆಸದಿರಲು ತೀರ್ಮಾನಿಸಲಾಗಿದೆ.
ಕುಸ್ತಿಪಟುಗಳಿಗೆಂದೇ ಇತ್ತು ಮೈಸೂರಿನ ಜಟ್ಟಿ ಆಸ್ಪತ್ರೆಗಳು
ವಿಜಯದಶಮಿ ದಿನ ಅರಮನೆಯ ಅಂಗಳದಲ್ಲಿ ಜರುಗುವ ವಜ್ರ ಮುಷ್ಠಿ ಕಾಳಗ ಇತಿಹಾಸ ಪ್ರಸಿದ್ಧಿ. ಈ ವಜ್ರಮುಷ್ಟಿ ಕಾಳಗದಲ್ಲಿ ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಿಂದ ನಾಲ್ವರು ಜಟ್ಟಿಗಳು ಭಾಗಹಿಸುತ್ತಿದ್ದರು. ಈ ಬಾರಿಯೂ ಕಾಳಗಕ್ಕೆ ಜಟ್ಟಿಗಳು ಸಜ್ಜಾಗುತ್ತಿದ್ದರು. ಆದರೆ ಅರಮನೆಯೊಳಗಿನ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀರ ಸರಳಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಬಾರಿ ಜಟ್ಟಿ ಕಾಳಗವನ್ನು ನಡೆಸುವುದಿಲ್ಲವೆಂದು ಅರಮನೆಯಿಂದ ಸಂದೇಶ ರವಾನೆಯಾಗಿದೆ.
ಇದುವರೆಗೂ ಒಂದು ವರ್ಷವೂ ಜಟ್ಟಿ ಕಾಳಗ ನಿಂತಿಲ್ಲ. ಆದರೆ ಈ ಬಾರಿ ಕೊರೊನಾ ಸೋಂಕು ವಜ್ರಮುಷ್ಟಿ ಕಾಳಗದ ಮೇಲೂ ಪರಿಣಾಮ ಬೀರಿದೆ. ಇದೀಗ, ಜಟ್ಟಿ ಕಾಳಗವನ್ನು ಸಾಂಪ್ರದಾಯಿಕ ರೀತಿಯಲ್ಲೇ ನಡೆಸುವಂತೆ ಜಟ್ಟಿಗಳು ಆಗ್ರಹಿಸಿದ್ದಾರೆ. ಈ ಕುರಿತು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜಮಾತೆಗೆ ಜಟ್ಟಿ ಗಳು ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು: ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 42,064 ಇದ್ದು, ಇದುವರೆಗೂ 33,629 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,549 ಇದ್ದು, ಇದುವರೆಗೆ 886 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
Recommended Video