ನಂಜನಗೂಡಿನಲ್ಲಿ ನಾಳೆ ನಡೆಯಬೇಕಿದ್ದ ಪ್ರಸಿದ್ಧ ಪಂಚಮಹಾರಥೋತ್ಸವ ರದ್ದು
ಮೈಸೂರು, ಏಪ್ರಿಲ್ 03: ನಾಳೆ ನಂಜನಗೂಡಿನಲ್ಲಿ ನಡೆಯಬೇಕಾದ ಪಂಚ ಮಹಾರಥೋತ್ಸವವು ನಡೆಯುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು ಮಾಹಿತಿ ನೀಡಿದ ಅವರು, "ಧಾರ್ಮಿಕ ಕಾರ್ಯಕ್ರಮಕ್ಕೆ ಸೂಚನೆ ಕೊಡಲಾಗಿದೆ. ದೇವಾಲಯದ ಒಳಗೆ ಯಾವುದೇ ಪೂಜೆ ಇದ್ದರೂ ಅರ್ಚಕರ ಸಾಮಾಜಿಕ ಅಂತರದಲ್ಲಿ ನೆರವೇರಲಿದೆ. ಆದರೆ ರಥ ಎಳೆಯುವುದು ಅಥವಾ ರಥಕ್ಕೆ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಎಲ್ಲರೂ ಮನೆಯಿಂದಲೇ ದೇವರನ್ನು ಪ್ರಾರ್ಥಿಸಿ. ಯಾರೂ ದೇವಾಲಯದ ಬಳಿ ಬರದೆ ಹೊರಗೆ ಓಡಾಡದೇ ಇರಿ" ಎಂದಿದ್ದಾರೆ.
ನಂಜನಗೂಡು ವಿಷಕಂಠನಿಗೂ ತಟ್ಟಿತು ಕೊರೊನಾ ಬಿಸಿ
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪಂಚಮಹಾರಥೋತ್ಸವ ಅದ್ಧೂರಿಯಿಂದ ನಡೆಯುತ್ತಿತ್ತು. ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಪರಿಣಾಮದಿಂದಾಗಿ ಎಲ್ಲವೂ ತಲೆಕೆಳಗಾಗಿದೆ. ಕೊರೊನಾ ಕಾರಣದಿಂದಾಗಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪಂಚ ಮಹಾರಥೋತ್ಸವ ನಡೆಯುವ ಬಗ್ಗೆಯೂ ಅನುಮಾನ ವ್ಯಕ್ತಗೊಂಡಿತ್ತು.
ಇದೀಗ ರಥೋತ್ಸವ ರದ್ದಾಗಿರುವ ಕುರಿತು ಮೈಸೂರು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.