ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ
ಮೈಸೂರು, ಫೆಬ್ರವರಿ 11: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬನ ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣದ ಯುವಕ ಮದನ್ ರಾಜ್ (22) ಎಂಬುವರು ಕೊಪ್ಪ ಆವರ್ತಿ ಬಳಿ ರಸ್ತೆ ಅಪಘಾತದಲ್ಲಿ ಫೆ.9 ರಂದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿ 24 ಗಂಟೆಗಳ ಕಾಲ ಅಬ್ಸರ್ವೇಶನ್ ನಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡ ಕಾರಣ ಮಾನವ ಅಂಗಾಂಗ ದಾನ ಕಾಯ್ದೆಯಂತೆ ಅವರ ಲಿವರ್ ಮತ್ತು ಒಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೂ, ಹೃದಯವನ್ನು ನಾರಾಯಣ ಹೃದಯಾಲಯಕ್ಕೂ ನೀಡಲಾಗಿದೆ. ಮತ್ತೊಂದು ಕಿಡ್ನಿಯನ್ನು ಎಲ್ಲಿಗೆ ನೀಡಿದ್ದಾರೆಂಬುದನ್ನು ಬಹಿರಂಗಪಡಿಸಲಾಗಿಲ್ಲ.
ಇಂದು ಮುಂಜಾನೆ ಹೃದಯವನ್ನು ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮತ್ತು ಝೀರೋ ಟ್ರಾಫಿಕ್ ನಲ್ಲಿ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಕೆ.ಜಿ.ಕೊಪ್ಪಲು, ಅಂಡರ್ ಬ್ರಿಡ್ಜ್, ಕೋರ್ಟ್ ರೋಡ್, ಡಿಸಿ ಆಫೀಸ್ ನಿಂದ ಹೈವೇ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಯಿತು.