ನಿಖಿಲ್ ಸೋಲಿಗೆ ಬೆರಳನ್ನೇ ಕಟ್ ಮಾಡಿಕೊಂಡಿದ್ದು ನಿಜವೇ?
ಮೈಸೂರು, ಮೇ 27: ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಕಣ್ಣು ಮಂಡ್ಯದತ್ತ ನೆಡುವಂತೆ ಮಾಡಿದ್ದು ನಿಖಿಲ್ ಹಾಗೂ ಸುಮಲತಾರವರ ಹಣಾಹಣಿಯ ಸ್ಫರ್ಧೆ. ಇದರಲ್ಲಿ ಬಹುಮತಗಳ ಅಂತರದಿಂದ ಗೆದ್ದು ಬೀಗಿದ ಮಂಡ್ಯದ ಸೊಸೆ ಸುಮಲತಾರವರನ್ನು ಸದ್ಯ ಎಲ್ಲರೂ ಅಭಿನಂದಿಸುತ್ತಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋತು ಹೋಗಿದ್ದು ಹಲವರಿಗೆ ನುಂಗಲಾರದ ತುತ್ತಾಗಿತ್ತು. ಇದೇ ನೆಪದಲ್ಲಿ, ಮೈತ್ರಿ ಅಭ್ಯರ್ಥಿ ಸೋತಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮತ ಹಾಕಿದ್ದ ಬೆರಳನ್ನೇ ಕತ್ತರಿಸಿಕೊಂಡಿದ್ದಾರೆಂಬ ಸುದ್ದಿಯೂ ಹರಿದಾಡಿತ್ತು.
ನಿಖಿಲ್ ಸೋತಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಹುಚ್ಚು ಅಭಿಮಾನಿ
ಈ ಸುದ್ದಿ ಅರೆಕ್ಷಣ ಎಲ್ಲರನ್ನೂ ದಿಗ್ಬ್ರಮೆಗೊಳಿಸಿತ್ತು. ಆದರೆ ಈ ಸುದ್ದಿ ನಿಜವೇ?
ಬೆರಳು ಕತ್ತರಿಸಿಕೊಂಡಿರುವ ಸುದ್ದಿ ನಿಜವಾದರೂ, ಅದಕ್ಕೆ ಕಾರಣ ಮಾತ್ರ ಬೇರೆ ಎಂಬುದು ಈಗ ತಿಳಿದುಬಂದಿದೆ. ಮಂಡ್ಯದಲ್ಲಿ ನಿಖಿಲ್ ಸೋತಿದ್ದಕ್ಕೆ ಮನನೊಂದು ಮಂಡ್ಯದ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಪ್ರಸನ್ನ ಎಂಬುವರು ಮತ ಹಾಕಿದ್ದ ತನ್ನ ಬೆರಳನ್ನೇ ಕತ್ತರಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಂಬಿಸುವ ಫೋಟೊಗಳು ಈಚೆಗೆ ವೈರಲ್ ಆಗಿದ್ದವು. ಅಲ್ಲದೇ ಈ ಸುದ್ದಿ ಜಿಲ್ಲೆಯಲ್ಲಿ ಸಾಕಷ್ಟು ಸಂಚಲವನ್ನುಂಟು ಮಾಡಿತ್ತು.
ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವಿಎಂ ಕಾರಣ: ಶಿವರಾಮೇಗೌಡ
ಆದರೆ ಇದರ ಅಸಲಿಯತ್ತು ಬೇರೆಯದ್ದೇ ಇದೆ. ಆತ ಕೆಲಸ ಮಾಡುವ ಸ್ಥಳದಲ್ಲಿ ಒಂದು ತಿಂಗಳ ಹಿಂದೆ ಯಂತ್ರಕ್ಕೆ ಬೆರಳು ಸಿಲುಕಿ ಆಗಿರುವ ಘಟನೆ ಇದಾಗಿದೆ. ಇದರಲ್ಲಿ ರಾಜಕೀಯ ಇಲ್ಲ. ಆದರೆ ದುಷ್ಕರ್ಮಿಗಳು ಚುನಾವಣೆ ಫಲಿತಾಂಶ ಹೊರಬಂದ ಬಳಿಕ ಈ ಪ್ರಕರಣವನ್ನು ಈ ರೀತಿ ತಿರುಗಿಸಿದ್ದಾರೆ ಎಂದು ಊರಿನ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಮದ್ದೂರಿನ ಆಬಲವಾಡಿಯ ಪ್ರಸನ್ನ ಪಕ್ಕಾ ಸುಮಲತಾ ಬೆಂಬಲಗ. ಅಲ್ಲದೇ ತನ್ನ ಫೇಸ್ಬುಕ್ ಖಾತೆಯಲ್ಲಿ ಸುಮಲತಾಗೆ ಮತ ನೀಡಿರುವ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಪ್ರಸನ್ನ, ಕೆಲಸ ಮಾಡುವ ಜಾಗದಲ್ಲಿ ಲೇತ್ ಮಿಷನ್ ಗೆ ಬೆರಳು ಸಿಲುಕಿ ತುಂಡಾಗಿ ಚಿಕಿತ್ಸೆ ಪಡೆದುಕೊಂಡು ಊರಿಗೆ ಬಂದಿದ್ದರು. ಆದರೆ ಗ್ರಾಮದ ಕೆಲವು ದುಷ್ಕರ್ಮಿಗಳು ಇವರ ಫೋಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಹಾಕಿ ಕಥೆ ಕಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.