ದಲ್ಲಾಳಿಗಳೇ ಗೈಡ್ ಗಳು; ಮೈಸೂರಿನಲ್ಲೀಗ ನಕಲಿ ಗೈಡ್ ಗಳ ಹಾವಳಿ
ಮೈಸೂರು, ಡಿಸೆಂಬರ್ 11: ನಗರದಲ್ಲಿ ಇದೀಗ ನಕಲಿ ಪ್ರವಾಸೀ ಮಾರ್ಗದರ್ಶಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯವೂ ಮೈಸೂರಿಗೆ ಸಹಸ್ರಾರು ಜನ ಪ್ರವಾಸಿಗರು ಹೊರ ರಾಜ್ಯಗಳಿಂದ ಆಗಮಿಸುತ್ತಾರೆ. ಇಲ್ಲಿ ಬರುವ ಪ್ರವಾಸಿಗರು ಮೊದಲೇ ಇಂಟರ್ ನೆಟ್ ನಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿಯನ್ನು ಪಡೆದೇ ಬಂದಿರುತ್ತಾರೆ.
ಆದರೆ ಪ್ರವಾಸಿಗರು ನೋಡಬಯಸುವ ಸ್ಥಳಗಳಿಗೆ ಭೇಟಿ ನೀಡುವುದಕ್ಕೂ ಮುನ್ನವೇ ಅವರನ್ನು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಅಥವಾ ಖಾಸಗೀ ವಾಹನ ಟೆಂಪೋ , ಪಾರ್ಕ್ ಮಾಡಿರುವ ಸ್ಥಳಗಳಿಗೆ ತೆರಳುವ ಈ ನಕಲಿ ಪ್ರವಾಸೀ ಗೈಡ್ ಗಳು ಅವರನ್ನು ಬೇರೊಂದು ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋಗಲು ಪ್ರೇರೇಪಿಸುತ್ತಿದ್ದಾರೆ.
ಅರಮನೆಗೆ ಹೋಗುವವರನ್ನು ದಾರಿ ತಪ್ಪಿಸುವ ನಕಲಿ ಗೈಡ್ ಗಳು
ನಗರದ ಪ್ರಮುಖ ಆಕರ್ಷಣೆ ಅರಮನೆ ಆಗಿದ್ದು, ಇಲ್ಲಿಗೆ ತೆರಳುವ ಪ್ರವಾಸಿಗರ ವಾಹನವನ್ನು ತಮ್ಮ ಸ್ಕೂಟರ್, ಆಟೋರಿಕ್ಷಾಗಳಲ್ಲಿ ಅಡ್ಡಗಟ್ಟುವ ನಕಲಿ ಪ್ರವಾಸೀ ಗೈಡ್ ಗಳು ಮೊದಲು ತಾವು ಗೈಡ್ ಗಳೆಂದು ಪರಿಚಯಿಸಿಕೊಳ್ಳುತ್ತಾರೆ. ನಂತರ ಯಾವ ಕಡೆ ಹೊರಟಿದ್ದೀರ ಎಂದು ಕೇಳುತ್ತಾರೆ. ಅವರು ಮೈಸೂರು ಅರಮನೆ ಎಂದರೆ, ಇವತ್ತು ರಾಜ ಕುಟುಂಬದವರ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅರಮನೆಯ ರಾತ್ರಿವರೆಗೂ ಮುಚ್ಚಲಾಗಿದೆ, ಸಾರ್ವಜನಿಕರಿಗೆ ಪ್ರವೇಶ ಇಲ್ಲ, ನೀವು ನಾಳೆ ನೋಡಬಹುದು ಇಂದು ಇಂತಹ ಕಾಂಪ್ಲೆಕ್ಸ್ ನಲ್ಲಿ ಶಾಪಿಂಗ್ ಮಾಡಿಕೊಂಡು ಬನ್ನಿ ಎಂದು ಬೆಣ್ಣೆ ಮಾತುಗಳಿಂದ ಮರುಳು ಮಾಡುತಿದ್ದಾರೆ.
ಡ್ರಾಪ್ ನೆಪದಲ್ಲಿ ಟೂರಿಸ್ಟ್ ಗೈಡ್ ದೋಚಿದ ದುಷ್ಕರ್ಮಿಗಳು
ದಲ್ಲಾಳಿಗಳೇ ನಕಲಿ ಗೈಡ್ ಗಳು
ಪ್ರವಾಸಿಗರೂ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಮತ್ತು ಗೈಡ್ ಗಳು ಮೊದಲೇ ಒನ್ ವೇ ಇದೆ ಪುನಃ ಸುತ್ತಿಕೊಂಡು ಬರಬೇಕು ಎಂದು ಹೆದರಿಸುವುದರಿಂದ ಈ ನಕಲಿ ಗೈಡ್ ಗಳು ಹೇಳಿದಂತೆ ಕೇಳುತ್ತಿದ್ದಾರೆ. ವಾಸ್ತವವಾಗಿ ಇವರು ಗೈಡ್ ಗಳೇ ಅಲ್ಲ. ಹೋಟೆಲ್ ಮಾಲೀಕರು, ಬಟ್ಟೆ ಅಂಗಡಿಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಮಾಲೀಕರ ದಲ್ಲಾಳಿಗಳಾಗಿರುತ್ತಾರೆ. ಪ್ರವಾಸಿಗರನ್ನು ದಾರಿ ತಪ್ಪಿಸಿ ಇಲ್ಲಿಗೆ ಕರೆತಂದರೆ ಇವರಿಗೆ ಕೈ ತುಂಬಾ ಕಮಿಷನ್ ಸಿಗುತ್ತಿದೆ.
ಆಂಧ್ರದ ಸಬ್ ಇನ್ಸ್ ಪೆಕ್ಟರ್ ಗೆ ಯಾಮಾರಿಸಿದ್ದರು
ಕಳೆದ ವಾರ ಇಬ್ಬರು ಪ್ರವಾಸಿಗರಿಗೆ ಈ ರೀತಿಯ ಅನುಭವವಾಗಿದ್ದು, ಆಂಧ್ರ ಪ್ರದೇಶದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನೇ ಅರಮನೆಗೆ ಇಂದು ಪ್ರವೇಶವಿಲ್ಲ ವಿವಾಹವಿದೆ ಎಂದು ಯಾಮಾರಿಸಿ ಬೇರೆ ಶಾಪಿಂಗ್ ಕಾಂಪ್ಲೆಕ್ಸ್ ಗೆ ಕರೆದೊಯ್ದಿದ್ದಾರೆ.
ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ!
55 ಪ್ರವಾಸಿ ಗೈಡ್ ಗಳ ಬಳಿ ಮಾತ್ರ ಪರವಾನಗಿ
ನಕಲಿ ಪ್ರವಾಸೀ ಗೈಡ್ ಗಳ ವಿರುದ್ಧ ಅರಮನೆಯ ಅಧಿಕಾರಿಗಳು ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್ ಅವರನ್ನು ಮಾತಾಡಿಸಿದಾಗ, ಜಿಲ್ಲೆಯಲ್ಲಿ ಒಟ್ಟು 55 ಮಂದಿಗೆ ಪ್ರವಾಸೀ ಗೈಡ್ ಪರವಾನಗಿ ನೀಡಲಾಗಿದೆ. ಇವರೆಲ್ಲರೂ ಬಿಳಿ ಸಮವಸ್ತ್ರ ಧರಿಸಿರುತ್ತಾರೆ ಮತ್ತು ಗುರುತು ಚೀಟಿ ಹೊಂದಿರುತ್ತಾರೆ. ಈ ಗೈಡ್ ಗಳು ಪ್ರವಾಸೀ ಕೇಂದ್ರಗಳ ಆವರಣದಲ್ಲಿ ಇರುತ್ತಾರೆಯೇ ಹೊರತು ರಸ್ತೆಗಳಲ್ಲಿ, ರೈಲು, ಬಸ್ ನಿಲ್ದಾಣಗಳಲ್ಲಿ ಇರುವುದಿಲ್ಲ. ಪ್ರವಾಸಿಗರು ಇಂಥವರ ವಿರುದ್ಧ ದೂರು ದಾಖಲಿಸುವಂತೆ ಕೋರಿದ್ದಾರೆ.