ವೇಶ್ಯಾವಾಟಿಕೆ ಅಡ್ಡೆಗಳಲ್ಲೂ ಅಡಗುತಾಣ! ಎಕ್ಸ್ ಪರ್ಟ್ ಎಸ್ಕೇಪ್ ಬಾಬು ಬಂಧನ
ಮೈಸೂರು, ನವೆಂಬರ್ 1: ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ರಹಸ್ಯ ಅಡಗು ತಾಣ ನಿರ್ಮಿಸುವಲ್ಲಿ ಪರಿಣತನಾದ ಎಸ್ಕೇಪ್ ಬಾಬು ಎಂದೇ ಹೆಸರಾಗಿದ್ದ ಚಾಣಾಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ಬಳಿಯ ನಗುವಿನಹಳ್ಳಿಯಲ್ಲಿ ವೇಶ್ಯಾವಾಟಿಕೆಯೊಂದರ ಅಡಗುತಾಣ ನಿರ್ಮಿಸುವಾಗಲೇ ರೆಡ್ ಹ್ಯಾಂಡ್ ಆಗಿ ಈತ ಸಿಕ್ಕಿಬಿದ್ದಿದ್ದಾನೆ.
ಶ್ರೀರಂಗಪಟ್ಟಣದಿಂದ ಮೈಸೂರು ಕಡೆಗೆ ಎಂಟು ಕಿಲೋಮೀಟರ್ ದೂರದಲ್ಲಿ ಹೆದ್ದಾರಿಯಿಂದ ಒಳಗೆ ಬೃಹತ್ ಬಂಗಲೆಯೊಂದರಲ್ಲಿ ಹೋಂ ಸ್ಟೇ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದರ ಬಗ್ಗೆ ಒಡನಾಡಿ ಸಂಸ್ಥೆಗೆ ಮಾಹಿತಿ ಬಂದಿತ್ತು. ಕೂಡಲೇ ಶ್ರೀರಂಗಪಟ್ಟಣ ಪೊಲೀಸರನ್ನು ಅಲರ್ಟ್ ಮಾಡಿ ಕೂಡಲೇ ದಾಳಿ ನಡೆಸಲಾಯಿತು. ಆಗ ಅಲ್ಲೇ ರಾತ್ರಿ 11 ಗಂಟೆ ಸುಮಾಎಇಗೆ ಗಾರೆ ಕೆಲಸ ಮಾಡುತಿದ್ದ ವ್ಯಕ್ತಿಯನ್ನು ಪೊಲೀಸರು ಅಂದಾಜಿನ ಮೇರೆಗೆ ಬಾಬು ಎಂದರು. ಕೂಡಲೇ ಓಗೊಟ್ಟ ಬಾಬು ಏನ್ಸಾರ್ ಎಂದು ಉತ್ತರಿಸಿದ. ಆಗಲೇ ಪೊಲೀಸರಿಗೆ ಖಚಿತವಾಯಿತು ಈತನೇ ಬಾಬು ಎಂದು.
ಬಾಡಿಗೆಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ
ಅಂದ ಹಾಗೆ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಅಡಗುತಾಣವನ್ನು ಏಕೆ ನಿರ್ಮಿಸುತ್ತಾರೆ? ಈತ ಹೇಗೆ ಅವುಗಳನ್ನು ಕಟ್ಟುತ್ತಿದ್ದ ಎಂಬುದರ ವಿವರ ಇಲ್ಲಿದೆ...
ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಎಸ್ಕೇಪ್ ಬಾಬು
ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯ ಕಾರ್ಯಕರ್ತರು ನಗುವಿನಹಳ್ಳಿಯ ಐಷಾರಾಮಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಸುಳಿವಿನ ಮೇರೆಗೆ ದಾಳಿ ನಡೆಸಿದ್ದರು. ಆಗ ಅಲ್ಲಿ ಯುವತಿಯರಿಗೆ ಅಡಗಿಕೊಳ್ಳಲು ಅಡಗು ತಾಣ ನಿರ್ಮಿಸುತ್ತಿದ್ದ ಬಾಬು ಬಲೆಗೆ ಬಿದ್ದಿದ್ದಾನೆ. ಪೊಲೀಸರು ಇದುವರೆಗೂ ಬಾಬುವಿನ ಹೆಸರು ಕೇಳಿದ್ದರೇ ಹೊರತು ಈತನನ್ನು ನೋಡಿಯೇ ಇಲ್ಲ. ಕೊನೆಗೂ ಬುಧವಾರ ರಾತ್ರಿ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ವೇಶ್ಯಾವಾಟಿಕೆ ಜಾಗದಲ್ಲಿ ಏನಿದು ಅಡಗುತಾಣ?
ವೇಶ್ಯಾವಾಟಿಕೆ ಸುಳಿವು ದೊರೆತ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ಮಾಡಿದರೆ ಅಥವಾ ಇನ್ನಾವುದೇ ಸಂದರ್ಭದಲ್ಲಿ ಯುವತಿಯರು ಬಚ್ಚಿಟ್ಟುಕೊಳ್ಳಲು ಕೋಣೆಯೊಳಗೇ ಅಡಗುತಾಣಗಳನ್ನು ರೂಪಿಸಿರಲಾಗುತ್ತದೆ. ಎಸ್ಕೇಪ್ ಬಾಬು ಮಂಚದ ಹಿಂಭಾಗ, ಷೋಕೇಸ್ ಹಿಂಭಾಗ, ಟಿವಿ ಸ್ಟಾಂಡ್ ಪಕ್ಕದಲ್ಲಿ ಯಾರಿಗೂ ಅನುಮಾನವೇ ಬಾರದಂತೆ ಅಡಗುತಾಣ ನಿರ್ಮಿಸುವುದರಲ್ಲಿ ನಿಸ್ಸೀಮ. ಬಹಳ ನಾಜೂಕಿನಿಂದ ಸಣ್ಣ ಸ್ಥಳದಲ್ಲೂ ಅಡಗುತಾಣ ನಿರ್ಮಿಸುವುದರಿಂದ ವೇಶ್ಯಾವಾಟಿಕೆ ದಂಧೆ ನಡೆಸುವವರು ಈತನಿಗೆ ಕರೆದು ಕೆಲಸ ಕೊಡುತಿದ್ದರು.
ಲೈವ್ ಬ್ಯಾಂಡ್ ಹುಡುಗಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ
ಯಾರು ಈ ಎಸ್ಕೇಪ್ ಬಾಬು?
ಎಸ್ಕೇಪ್ ಬಾಬು ಹರಿಹರದವನು. ಅಲ್ಲೇ ನೆಲೆಸಿರುವ ಈತನ ಹೆಸರು ವೇಶ್ಯಾವಾಟಿಕೆ ದಾಳಿಗಳು ನಡೆದ ಸಂದರ್ಭದಲ್ಲಿ ಕೇಳಿಬರುತ್ತದೆ. ಆದರೆ ಇದುವರೆಗೂ ಈತನ ಫೋಟೊ, ವಿವರಗಳಾವುವೂ ಪೊಲೀಸರಿಗೆ ಲಭ್ಯವಿರಲಿಲ್ಲ. ದಾಳಿಯ ನಂತರ ಪೊಲೀಸರೂ ಈತನನ್ನು ಮರೆತುಬಿಡುತಿದ್ದರು.
ಎಸ್ಕೇಪ್ ಬಾಬುಗೆ ಭಾರಿ ಡಿಮ್ಯಾಂಡ್
ಈತನು ತನ್ನ ನಂಬಿಕಸ್ಥರಿಗೆ ಮಾತ್ರ ಅಡಗುತಾಣ ನಿರ್ಮಿಸಿಕೊಡುತ್ತಿದ್ದ. ಹೊಸಬರಿಗೆ ನಿರ್ಮಿಸಿ ಕೊಡುತ್ತಿರಲಿಲ್ಲ. ಅಡಗು ತಾಣ ಬೇಕಾದವರು ಈತನನ್ನು ಹರಿಹರದಿಂದ ಕರೆಸುತಿದ್ದರು ಎಂದರೆ ಈತನ ಬೇಡಿಕೆ ಎಷ್ಟಿದೆ ಎಂದು ಅರಿವಾಗುತ್ತದೆ. ಎರಡು ದಶಕಗಳಿಂದಲೂ ಈತನು ರಾಜ್ಯದ ವಿವಿಧ ಊರುಗಳಲ್ಲಿ ಅಡಗು ತಾಣ ನಿರ್ಮಿಸಿರುವುದಾಗಿ ತಿಳಿದುಬಂದಿದೆ.
ಈತನಿಗೆ ಬರುತ್ತಿದ್ದುದು ಲಕ್ಷ ಲಕ್ಷ ಕೂಲಿ
ಈತ ರಾತ್ರಿ ವೇಳೆ ಮಾತ್ರ ಅಡಗುತಾಣ ನಿರ್ಮಾಣ ಮಾಡುತ್ತಿದ್ದ, ಅಲ್ಲದೆ ತನ್ನ ಸಹಾಯಕನನ್ನಾಗಿ ಒಬ್ಬನನ್ನು ಮಾತ್ರವೇ ಇಟುಕೊಳ್ಳುತ್ತಿದ್ದ. ಈತ ತನ್ನ ಕೂಲಿಯಾಗಿ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳವರೆಗೂ ಪಡೆಯುತಿದ್ದ ಎಂದು ಹೇಳಲಾಗಿದೆ. ಈತ ನಿರ್ಮಿಸಿದ ಅಡಗು ತಾಣಗಳು ಎಷ್ಟು ನಾಜೂಕಾಗಿದ್ದವು ಎಂದರೆ ಪೊಲೀಸರೂ ಮನೆ ರೇಡ್ ಮಾಡಿ ಏನೂ ಸಿಗದೆ ವಾಪಸ್ಸಾಗಿದ್ದ ನಿದರ್ಶನಗಳೂ ಇವೆ.