ಅಸಮಾನ್ಯ ಸಾಧನೆಗೈದ ಶೇಖರ್ ಪದ್ಮಶ್ರೀಯ ‘ನಾಯಕ’
ಒನ್ ಇಂಡಿಯಾ ಜತೆ 'ಪದ್ಮ ಶ್ರೀ' ಪ್ರಶಸ್ತಿ ವಿಜೇತ ಶೇಖರ್ ನಾಯಕ್ ವಿಶೇಷ ಸಂದರ್ಶನ
ಮೈಸೂರು, ಜನವರಿ 26 : ಕಣ್ಣಿದ್ದು ನಮಗೆ ಸಾಧನೆ ಮಾಡೋದು ಕಷ್ಟಸಾಧ್ಯ. ಅಂತಹದ್ದರಲ್ಲಿ ಕಣ್ಣು ಕಾಣದೆಯೇ ಸಾಧನೆಗೈದು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ ಶೇಖರ್ ನಾಯಕ್. 30ರ ಹರೆಯದ ಈ ಯುವಕ ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆ.
ಶೇಖರ್ ನಾಯಕ್ 'ಒನ್ ಇಂಡಿಯಾ' ಜೊತೆ ತಮ್ಮ ಮನದಾಳದ ಭಾವನೆಯನ್ನು ಹಂಚಿಕೊಂಡಿದ್ದು ಹೀಗೆ..
ಪದ್ಮಶ್ರೀ ನಿಮಗೆ ದೊರಕಿದ ಪರಿ.. ಹಿನ್ನೋಟ ತಿಳಿಸುತ್ತೀರಾ...?
ಪದ್ಮಶ್ರೀ ಎಂದರೆ ಸಾಕು ಒಂದು ಕಾಲದಲ್ಲಿ ಎದ್ದು ನಿಂತು ಗೌರವ ಕೊಡುತ್ತಿದೆ. ಆದರೆ ಈಗ ಪದ್ಮಶ್ರೀ ನನಗೆ ಸಿಕ್ಕಿದೆ ಎಂದು ಮಾಧ್ಯಮ ಹಾಗೂ ಸ್ನೇಹಿತರು ತಿಳಿಸಿದಾಗ ನನ್ನ ಖುಷಿಗೆ ಪಾರವೇ ಇಲ್ಲ. ನನ್ನನ್ನೇ ನಾನು ಚಿವುಟಿಕೊಂಡು ನೋಡಿದೆ.. ಇದು ಕನಸೋ ಅಥವಾ ನನಸೋ ಎಂದು. ಎಂದಿಗೂ ಇಂತಹ ಅವಾರ್ಡ್ಗಳಿಗಾಗಿ ಅರ್ಜಿ ಗುಜರಾಯಿಸಿದವನಲ್ಲ.. ಆದರೂ ಇದು ಅರಸಿ ಬಂದಿದೆ. ಖಂಡಿತಾ ಇದನ್ನು ಸ್ವೀಕರಿಸುತ್ತೇನೆ. ಇದು ನನ್ನ ಸಾಧನೆಗೆ ಬಂದದ್ದಲ್ಲ. ನನ್ನಂತಹ ನೂರಾರು ಜನ ಅಂಧ ಕ್ರಿಕೆಟರ್ ಗಳಿಗೆ ಬಂದದ್ದು. ನನ್ನ ಈ ಪ್ರಶಸ್ತಿ ಅವರಿಗೆ ಮುಂದಿನ ಗುರಿಯನ್ನು ತಲುಪಲಿಕ್ಕೆ ಅಡಿಪಾಯ ಹಾಕಿಕೊಟ್ಟಂತಿರಲಿ.
ನಿಮ್ಮ ಲೇವಡಿಕಾರರಿಗೆ ಈಗ ಏನು ಹೇಳುತ್ತೀರಿ..?
ಅಯ್ಯೋ ಇವನು ಕುರುಡ ಕಣ್ರೀ.. ಇವನೆಂಥಾ ಆಟ ಆಡುತ್ತಾನೆ. ಕಣ್ಣೇ ಕಾಣಿಸೋಲ್ಲ ಎಂದವರೇ ಹೆಚ್ಚು. ಅಂತಹವರಿಗೆ ಈ ಪ್ರಶಸ್ತಿ ದಿಟ್ಟ ಉತ್ತರ. ನಿನಗೆ ಸರಿಯಾಗಿ ಕಣ್ಣು ಕಾಣಿಸದೇ ಇರಬಹುದು. ಆದರೆ ಇಡೀ ಪ್ರಪಂಚಕ್ಕೆ ನೀನು ಕಾಣಿಸಬೇಕು. ನೀನು ಯಾರು ಎಂದು ಎಲ್ಲರಿಗೂ ಗೊತ್ತಾಗಬೇಕು ಎಂದು ಅಮ್ಮ ಪದೇ ಪದೇ ಹೇಳುತ್ತಿದ್ದಳು. ಈಗ ಅಮ್ಮ ಇಲ್ಲ. ಆದರೆ ಆಕೆಯ ಆ ಮಾತುಗಳನ್ನು ನಾನೆಂದೂ ಮರೆಯಲಾರೆ.
ನಿಮ್ಮ ಬಾಲ್ಯ ಹಾಗೂ ಸಾಧನೆಯ ಯಶೋಗಾಥೆ ತಿಳಿಸುವಿರಾ..?
ನನ್ನ ತಾಯಿ ಜಮಿಲಾಬಾಯಿ. ಆಕೆ ಸಹ ಅಂಧೆ. ಅಷ್ಟೇ ಅಲ್ಲ4 ಸಹೋದರಿಯರು ಸಹ ಅಂಧರೇ.. ನನಗೆ ಹುಟ್ಟಿನಿಂದಲೂ ಈ ಸಮಸ್ಯೆ ಇದೆ. ಆದರೆ ಇದು ನನ್ನ ಸಾಧನೆಗೆ ಎಂದಿಗೂ ಅಡ್ಡಿಯಾಗಿಯೇ ಇಲ್ಲ. ನಾನು ಜನಿಸಿದ 8 ವರುಷ ಸಂಪೂರ್ಣ ಅಂಧನಾಗಿದ್ದೆ. ಒಮ್ಮೆ ಕಾಲುವೆಯಲ್ಲಿ ಬಿದ್ದಾಗ ಕಣ್ಣಿಗೆ ಪೆಟ್ಟಾಗಿತ್ತು. ಆಗ ಶಸ್ತ್ರಚಿಕಿತ್ಸೆಗೈದ ಬಳಿಕ ಕೊಂಚ ದೃಷ್ಟಿ ಪಡೆದೆ. ಅದಾದ ಬಳಿಕ ಅಪ್ಪ ಲಚ್ಮಾ ನಾಯಕ್ ತೀರಿಕೊಂಡ. ಅವರ ಮುಖ ಕೂಡ ನೋಡಲು ಸಾಧ್ಯವಾಗಲಿಲ್ಲ. ನಂತರ ಅಮ್ಮ ಸಹ ಕಾಲವಾದಳು. ನಾನು ಜನಿಸಿದ್ದು 1986 ಶಿವಮೊಗ್ಗದಲ್ಲಿ. ನಂತರ ನನ್ನ ಸಾಧನೆಗೆ ಅಡಿಗಲ್ಲು ಹಾಕಿದ್ದು ಶಾರದಾ ಅಂಧರ ವಿದ್ಯಾ ಸಂಸ್ಥೆ ಹಾಗೂ ಸಮರ್ಥನಂ ತಂಡ..
ನಿಮ್ಮ ಕ್ರಿಕೆಟ್ ಪಯಣದ ಹಾದಿ ತಿಳಿಸುವಿರಾ...?
ಶಾಲಾ ದಿನಗಳಲ್ಲಿ ಕ್ರಿಕೆಟ್ ಜೀವನ ಆರಂಭಿಸಿದೆ. ವಲಯ, ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ನಲ್ಲಿ ಆಟವಾಡಿದೆ. 2003ರಲ್ಲಿ ಅತಿಥೇಯ ಪಾಕಿಸ್ತಾನ ತಂಡದ ವಿರುದ್ಧ 198 ರನ್ ಬಾರಿಸಿದ್ದು ನೆನಪಿದೆ. ಇದು ವೃತ್ತಿ ಜೀವನದ ಅವಿಸ್ಮರಣೀಯ ಪಂದ್ಯಗಳಲ್ಲಿ ಒಂದು. ಇದು ಅವರ ಜೀವನದಲ್ಲಿ ಯಾವುದೇ ಕ್ರಿಕೆಟ್ ನಲ್ಲಿಗಳಿಸಿದ ಗರಿಷ್ಠ ರನ್. 2003ರಲ್ಲಿ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಭಾರತ ಪ್ರವಾಸ ಮಾಡಿತ್ತು. ಈ ಪಂದ್ಯದಲ್ಲೂ ಅಮೋಘ ಆಟ ಪ್ರದರ್ಶಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದೆ. 2006ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತೆ. ಆದರೆ ಫೈನಲ್ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋಲು ಕಂಡು ದೊಡ್ಡ ನಿರಾಶೆ ಅನುಭವಿಸುವಂತಾಯಿತು. ಸರಣಿ ಶ್ರೇಷ್ಠ ಮತ್ತು ಸರಣಿಯಲ್ಲಿ 3 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದೆ. 2010ರಲ್ಲಿ ಮತ್ತೆ ರಾಷ್ಟ್ರೀಯ ತಂಡದ ನಾಯಕನಾಗುವ ಅವಕಾಶ ಸಿಕ್ಕಿತು.
2012ರಲ್ಲಿ ಟಿ20ವಿಶ್ವಕಪ್ ಗೆದ್ದುಕೊಂಡ ತಂಡದ ನಾಯಕನಾಗಿದ್ದೆ. ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಾಗಲೂ ನಾನೇ ನಾಯಕ.
ಅಂಧರ ಕ್ರಿಕೆಟ್ ಬಗ್ಗೆ ಸರಕಾರ ಆಸಕ್ತಿ ತೋರಿದೆಯೇ...?
ಖಂಡಿತಾ ಇಲ್ಲ. ಕೇರಳ, ಪಾಂಡಿಚೆರಿ ಸೇರಿದಂತೆ ಹಲವು ಸರಕಾರ ಅಂಧರು ಗೆದ್ದಲ್ಲಿ ಅವರಿಗೆ ಸರಕಾರಿ ಉದ್ಯೋಗ, ಮಾಸಾಶನ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಿದೆ. ಆದರೆ ನಮ್ಮ ನಾಯಕರು ಒಂದು ದಿನ ಕಾರ್ಯಕ್ರಮ ಮಾಡಿ ಹಾರ ಹಾಕಿ ಸುಮ್ಮನೆ ಬೆನ್ನು ತಿರುಗಿಸಿ ಹೋಗುತ್ತಾರೆ. ಈಗಲೂ ಅಷ್ಟೇನಮಗಾಗಿ ಆಟವಾಡಲು ಮೈದಾನವೂ ಇಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಅಂಧರ ತಂಡ ವಿಶ್ವಕಪ್ ಗೆದ್ದಾಗ ತಿರುಗಿಯೂ ನೋಡಲಿಲ್ಲ.