ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ ಮಹೇಶ್ ಮಾತಿನ ಚಕಮಕಿ
ಮೈಸೂರು, ಜನವರಿ 12: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಈ ಹಿಂದೆ ಟೀಕೆಗಳನ್ನು ಮಾಡಿದ್ದ ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಮಂಗಳವಾರ ಮತ್ತೊಮ್ಮೆ ರೋಹಿಣಿ ಸಿಂಧೂರಿ ಅವರನ್ನು ಟೀಕಿಸಿದರು. ಅಲ್ಲದೇ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಮಂಗಳವಾರದಂದು ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಅದರಂತೆ ಜಿಲ್ಲಾ ಪಂಚಾಯತಿ ಕಚೇರಿಯ ಸಭೆಗೆ ಬಂದಿದ್ದ ರೊಹಿಣಿ ಸಿಂಧೂರಿ ಅವರು ವೇದಿಕೆಯ ಮುಂದೆ ಕುಳಿತಿದ್ದರು.
ವಿಶ್ವನಾಥ್ಗೆ ಸಚಿವ ಸ್ಥಾನ; ಸಾ. ರಾ. ಮಹೇಶ್ ಸರಣಿ ಟ್ವೀಟ್
ಆಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿದ್ದಾಗ, ""ತಮಗೆ ಕೇಳುತ್ತಿಲ್ಲ, ಮಾಸ್ಕ್ ತೆಗೆದು ಮಾತನಾಡಿ'' ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಅದಕ್ಕೆ ಡಿಸಿ ರೋಹಿಣಿ ಅವರು, ""ನಾನು ಮಾಸ್ಕ್ ತೆಗೆಯಲ್ಲ, ಮಾಸ್ಕ್ ತೆಗೆದು ಮಾತಾಡುವುದು ಕೋವಿಡ್-19 ಮಾರ್ಗಸೂಚಿಯ ಉಲ್ಲಂಘನೆ ಆಗುತ್ತದೆ'' ಎಂದರು.
""ನಿಮ್ಮನ್ನು ಸಭೆಗೆ ಕರೆದಿರಲಿಲ್ಲ. ಆದರೂ, ತಾವು ಬಂದಿದ್ದು ಸಂತೋಷ. ಜಿಲ್ಲಾಧಿಕಾರಿಗೆ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಹಾಗಾಗಿ ನಾವು ಮಾಹಿತಿ ಕೊಟ್ಟಿದ್ದೇವೆ ಎಂದು ಸಾ.ರಾ. ಮಹೇಶ್ ಹೇಳಿದರು. ನೂತನವಾಗಿ ರಚನೆ ಆಗಿರುವ ಕಾಗದ ಪತ್ರಗಳ ಸಮಿತಿಯನ್ನೂ ನೀವು ಸ್ವಾಗತಿಸಿಲ್ಲ.''
ಆದರೂ ಪರವಾಗಿಲ್ಲ ಸಮಯ ಇದ್ದರೆ ಇರಿ ಎಂದು ಶಾಸಕ ಸಾ.ರಾ ಮಹೇಶ್ ಹೇಳಿದರು. ನಿಮಗೆ ಬೇರೆ ಕೆಲಸ ಇದ್ದರೆ ಹೋಗಬಹುದು ಎಂದರು. ಸಾ.ರಾ.ಮಹೇಶ್ ಹೀಗೆ ಹೇಳುತ್ತಿದ್ದಂತೆ, ಡಿಸಿ ರೋಹಿಣಿ ಸಿಂಧೂರಿ ಅವರು ಸಭೆಯಿಂದ ಹೊರ ನಡೆದು, ತಮ್ಮ ಕಾರು ಹತ್ತಿ ತೆರಳಿದರು.