ಮೈಸೂರು ನಮ್ಮ-112 ರಿಂದ ಶ್ಲಾಘನೀಯ ಕಾರ್ಯ
ಮೈಸೂರು, ಫೆಬ್ರವರಿ 18: ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸುವ ಮತ್ತು ಸಾರ್ವಜನಿಕರ ಕರೆಗೆ ತುರ್ತಾಗಿ ಸ್ಪಂದಿಸುವ ಸಂಬಂಧ ಜಾರಿಗೆ ತಂದಿರುವ ತುರ್ತು ಸ್ಪಂದನ ನಮ್ಮ-112 ವಾಹನಗಳ ಅಧಿಕಾರಿ ಮತ್ತು ಸಿಬ್ಬಂದಿ ಮೈಸೂರು ನಗರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು ನಗರದಲ್ಲಿ ಸಾರ್ವಜನಿಕರ ದೂರು ಸ್ವೀಕರಿಸಿ ತಕ್ಷಣ ಸ್ಪಂದಿಸುವ ಸಲುವಾಗಿ ಡಿಸೆಂಬರ್ 12, 2020ರಂದು ತುರ್ತುಸ್ಪಂದನ ನಮ್ಮ-112 ವಾಹನಗಳಿಗೆ ಚಾಲನೆ ನೀಡಲಾಗಿತ್ತು.
ಹಾಪ್ ಕಾಮ್ಸ್ನಿಂದ ತರಕಾರಿ, ಹಣ್ಣು ಮನೆ ಬಾಗಿಲಿಗೆ
ಈ ವಾಹನಗಳಲ್ಲಿ ಎಎಸ್ಐಗಳಾದ ಬಸವರಾಜ ಅರಸ್, ಮೋಹನ ಕುಮಾರ್, ರಮೇಶ, ಸಿಬ್ಬಂದಿಗಳಾದ ಕೃಷ್ಣ, ವರದರಾಜು, ರಾಜೇಂದ್ರ ಪ್ರಕಾಶ್, ಚಿಕ್ಕಬಸವೇಗೌಡ, ಕೀರ್ತಿ, ಯುವರಾಜ, ನರಸಿಂಹ ಸೇರಿದಂತೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಿಬ್ಬಂದಿ ಸಾರ್ವಜನಿಕರು 112 ಗೆ ನೀಡಿದ ದೂರುಗಳಿಗೆ ಉತ್ತಮ ತುರ್ತು ಸ್ಪಂದನೆ ಮತ್ತು ಕರ್ತವ್ಯ ಪ್ರಜ್ಞೆ ತೋರಿದ್ದು, ಇದುವರೆಗೆ 2603 ದೂರುಗಳನ್ನು ಸಾರ್ವಜನಿಕರು ನೀಡಿದ್ದು, ಅದಕ್ಕೆ ಸರಾಸರಿ 10 ನಿಮಿಷದಲ್ಲಿ ಕರೆದಾರರು ಮಾಹಿತಿ ನೀಡಿದ ಸ್ಥಳಕ್ಕೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಿರುವುದು ವಿಶೇಷವಾಗಿದೆ.
ಸಿಬ್ಬಂದಿಯ ಕಾರ್ಯವನ್ನು ಗುರುತಿಸಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸುವ ಮೂಲಕ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಿದ್ದಾರೆ. ಜತೆಗೆ ಇನ್ಮುಂದೆಯೂ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯಕ್ಕಾಗಿ 112 ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ನಮ್ಮ-112 ವ್ಯವಸ್ಥೆಯ ಸದುಪಯೋಗ ಪಡೆಯುವಂತೆ ಮನವಿ ಮಾಡಿದ್ದಾರೆ.