ಸಿಎಂ ಯಡಿಯೂರಪ್ಪ ಪರವಾಗಿ ಮತ್ತೊಮ್ಮೆ ಜಿ.ಟಿ ದೇವೇಗೌಡ ಮಾತು
ಮೈಸೂರು, ಆಗಸ್ಟ್ 28: "ಯಡಿಯೂರಪ್ಪ ಸಮರ್ಥರಿದ್ದಾರೆ. ಅವರ ನೇತೃತ್ವದ ಬಿಜೆಪಿ ಸರ್ಕಾರ ಉಳಿಯುತ್ತದೆ. ಯಾವುದೇ ಕಾರಣಕ್ಕೆ ಮಧ್ಯಂತರ ಚುನಾವಣೆ ಬರಲು ಸಾಧ್ಯವಿಲ್ಲ" ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಮಲಪಾಳಯದ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ್ದಾರೆ.
ಪೇಜಾವರ ಶ್ರೀಗಳು ರಾಮ್ದಾಸ್ ಕುರಿತು ಸಿಎಂಗೆ ಮಾಡಿದ ಶಿಫಾರಸ್ಸೇನು?
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರಾಜಕೀಯ ನಿವೃತ್ತಿ ಕುರಿತ ವಿಚಾರದ ಬಗ್ಗೆ ಕ್ಷೇತ್ರದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಜನರ ಮಾತು ಕೇಳದೇ ಏನೂ ತೀರ್ಮಾನ ಕೈಗೊಳ್ಳುವುದಿಲ್ಲ ಎಂಬುದಾಗಿ ಭರವಸೆ ನೀಡಿದ್ದೇನೆ. ಚುನಾವಣೆ ನಡೆಯಲು ಇನ್ನೂ ಮೂರೂವರೆ ವರ್ಷ ಇದೆ. ಆಮೇಲೆ ನೋಡೋಣ" ಎಂದರು.
"ಯಡಿಯೂರಪ್ಪನವರ ಸರ್ಕಾರ ಸುಭ್ರವಾಗಿರಲಿದೆ. ಅವರೊಬ್ಬ ಸಮರ್ಥ ನಾಯಕ. ಅವರ ನೇತೃತ್ವದ ಬಿಜೆಪಿ ಸರ್ಕಾರ ಉಳಿಯುತ್ತದೆ. ಯಾವುದೇ ಕಾರಣಕ್ಕೆ ಮಧ್ಯಂತರ ಚುನಾವಣೆ ಬರಲು ಸಾಧ್ಯವಿಲ್ಲ. ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳುತ್ತಾರೆ" ಎಂದರು.
"ಚುನಾವಣೆ ನಂತರ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ಜನರ ಕಷ್ಟಸುಖ ಕೇಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹಳ್ಳಿಗಳಲ್ಲಿ ತಿರುಗಾಡುತ್ತಿದ್ದೇನೆ. ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದೇನೆ" ಎಂದು ತಿಳಿಸಿದರು.