ಟ್ರೇನ್ ಹೋದ್ಮೇಲೆ ಟಿಕೆಟ್ ತಗೊಂಡ್ರಲ್ಲಾ ಸಿದ್ರಾಮಣ್ಣ: ಮಾಜಿ ಸಚಿವ ಎ.ಮಂಜು
Recommended Video
ಮೈಸೂರು, ಆಗಸ್ಟ್ 24: "ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಕೇವಲ ನಾಲ್ಕು ಜನರಿಗೆ ಮಾಡಿಕೊಂಡಿದ್ದ ಸರ್ಕಾರ. ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಅವರಿಗಷ್ಟೇ ಸರ್ಕಾರ ಸೀಮಿತವಾಗಿತ್ತು" ಎಂದಿದ್ದಾರೆ ಮಾಜಿ ಸಚಿವ ಎ. ಮಂಜು.
ಸಿದ್ದರಾಮಯ್ಯ-ದೇವೇಗೌಡ ಯುದ್ಧ: ಕುಮಾರಸ್ವಾಮಿ ಶಾಂತಿ ಮಂತ್ರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಇಬ್ಬರಿಗೂ ಈಗ ಸತ್ಯ ಅರ್ಥವಾಗಿದೆ. ಆ ಸರ್ಕಾರದಲ್ಲಿ ಯಾವ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರಿಗೂ ಉಪಯೋಗ ಆಗಿಲ್ಲ. ಅದೊಂದು ಸಿಂಗಲ್ ವಿಂಡೋ ಸರ್ಕಾರ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ" ಎಂದರು.
"ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಸಿದ್ರಾಮಣ್ಣನಿಗೆ ಮೊದಲೇ ಹೇಳಿದ್ದೆ. ಈಗ ಅವರಿಗೆ ಅರ್ಥ ಆಗಿದೆ. ರೇವಣ್ಣನ ಮಾತು ಕೇಳಿಕೊಂಡು ಅರಕಲಗೂಡಿಗೆ ಸಿದ್ಧರಾಮಯ್ಯ ಬಂದಿದ್ದರು. ಸಿದ್ರಾಮಣ್ಣ ಈಗ ಮಾತನಾಡುತ್ತಿರೋದು ರೈಲು ಹೋದ ಮೇಲೆ ಟಿಕೆಟ್ ಪಡೆದಂತೆ. ಈಗ ಮಾತನಾಡಿ ಪ್ರಯೋಜನ ಇಲ್ಲ. ಸಿದ್ರಾಮಣ್ಣ ಅಥವಾ ಕಾಂಗ್ರೆಸ್ ಗೆ ಈಗ ದೇವೇಗೌಡರ ಕುಟುಂಬ ಏನೆಂದು ಅರ್ಥವಾಗಿದೆ" ಎಂದು ವ್ಯಂಗ್ಯವಾಡಿದರು.
ದೇವೇಗೌಡರ 'ಹಳೆಯ ಆಟ' ನೆನಪಿಸಿ, ಮತ್ತೆ ಬೆಂಕಿಯುಗುಳಿದ ಸಿದ್ದರಾಮಯ್ಯ
"ಈಗ ಅತೃಪ್ತರು ಪಕ್ಷದ ನಡವಳಿಕೆಯಿಂದ ಬೇಸರವಾಗಿ ಬಂದಿದ್ದಾರೆ. ದೇವೇಗೌಡರಿಗೆ ಅವರ ಕುಟುಂಬಸ್ಥರು ಮಾತ್ರ ರಾಜಕೀಯದಲ್ಲಿ ಇರಬೇಕು ಅನ್ನೋದೆ ಉದ್ದೇಶ. ಈಗ ಉಪಚುನಾವಣೆಯಲ್ಲಿ ನೋಡಿ, ಅವರ ಕುಟುಂಬದ ಎಷ್ಟು ಜನರಿಗೆ ಟಿಕೆಟ್ ಕೊಡುತ್ತಾರೆ" ಎಂದು ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
"ದೇವೇಗೌಡರು ಅವರ ಮಗನಿಗೆ ಅಧಿಕಾರ ಹೋಗಿದೆ ಅಂತ ಹೀಗೆ ಮಾತನಾಡುತ್ತಿದ್ದಾರೆ. ಅವರ ಮಗನ ಅಧಿಕಾರವನ್ನು ಯಾರೂ ಕಿತ್ತುಕೊಂಡಿಲ್ಲ. ಕೊಟ್ಟ ಅಧಿಕಾರವನ್ನು ನಡೆಸಲಾಗದೆ ಕೆಳಗೆ ಇಳಿದಿದ್ದಾರೆ. ಈಗ ಅದಕ್ಕೆ ಅವರು ಕಾರಣ ಇವರು ಕಾರಣ ಎನ್ನುತ್ತಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಬಿಜೆಪಿ ಕಾರಣವೇ ಅಲ್ಲ" ಎಂದರು.