ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಉದ್ಧಾರ ಆಗಲ್ಲ: ಸಾರಾ ಮಹೇಶ್
ಮೈಸೂರು, ಆಗಸ್ಟ್ 26: "ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಯಾವುದೇ ಕಾರಣಕ್ಕೂ ಉದ್ಧಾರ ಆಗುವುದಿಲ್ಲ" ಎಂದು ಮಾಜಿ ಸಚಿವ ಸಾರಾ ಮಹೇಶ್ ಅನರ್ಹ ಶಾಸಕರ ವಿರುದ್ಧ ಗುಡುಗಿದ್ದಾರೆ.
"ಎಚ್ಡಿಕೆಯನ್ನು ಹಳೆ ಮೈಸೂರಿನ ಸಿಎಂ ಎಂದ ನಿಮ್ಮನ್ನು ಏನನ್ನೋಣ?"
ಮೈಸೂರಿನ ಕಾಟ್ನಾಳು ಗ್ರಾಮದಲ್ಲಿ ಮಾತನಾಡಿದ ಅವರು, "ರಾಜಕೀಯವಾಗಿ ಮೂಲೆಗುಂಪಾಗಿ ಆಸ್ಪತ್ರೆಗೆ ಸೇರಿದ್ದವರನ್ನು ಕರೆತಂದು ನಮ್ಮ ಪಕ್ಷದಲ್ಲಿ ಅಧಿಕಾರ ನೀಡಿದ್ದೆವು. ಆದರೆ ಕೊನೆಗೆ ಅವರು ನಮ್ಮ ಪಕ್ಷದಲ್ಲಿದ್ದುಕೊಂಡೇ ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕಿದರು. ಅವರನ್ನು ಕರೆತಂದದ್ದು ನಮ್ಮ ತಪ್ಪು. ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಯಾರೂ ಅಷ್ಟು ಸುಲಭವಾಗಿ ಉದ್ಧಾರವಾಗುವುದಿಲ್ಲ" ಎಂದು ಆಕ್ರೋಶ ಹೊರಹಾಕಿದರು.
"ನಮ್ಮ ನಾಯಕರಾದ ಕುಮಾರಸ್ವಾಮಿ ಹಾಗೂ ನನ್ನ ಮೇಲೆ ನಿಂದಿಸುತ್ತಾ ಇಲ್ಲಸಲ್ಲದ ಆರೋಪ ಮಾಡಿಕೊಂಡು ತಿರುಗಾಡುತ್ತಿದ್ದವರು ಇಂದು ಉದ್ದುದ್ದ ಮಾತನಾಡುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯುವುದಿಲ್ಲ. ಕಾಲ ಹೇಗೆ ಬದಲಾಗುತ್ತದೆ ಎಂಬುದು ಸ್ವಲ್ಪ ದಿನದಲ್ಲಿಯೇ ಅವರಿಗೆ ತಿಳಿಯಲಿದೆ" ಎಂದು ಅನರ್ಹ ಶಾಸಕರ ವಿರುದ್ಧ ಹರಿಹಾಯ್ದರು.