ಅಧಿಕಾರ ನಡೆಸಲು ಬಾರದವರು ಕುಮಾರಸ್ವಾಮಿ ಥರ ಮಾತನಾಡುತ್ತಾರೆ: ಸಿದ್ದರಾಮಯ್ಯ
Recommended Video
ಮೈಸೂರು, ಆಗಸ್ಟ್ 25: " ಸಿದ್ದರಾಮಯ್ಯನವರು ನನ್ನನ್ನು ಕ್ಲರ್ಕ್ ನಂತೆ ನೋಡಿಕೊಂಡಿದ್ದರು" ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ನನ್ನನ್ನು ಶತ್ರುವಿನಂತೆ ನೋಡಿದ್ದು ಸಮಸ್ಯೆಯಾಗಿದೆ. ನನ್ನನ್ನು ಸ್ನೇಹಿತನಂತೆ ಭಾವಿಸಿದ್ದರೆ ಈ ಮಾತುಗಳು ಹೊರಬರುತ್ತಿರಲಿಲ್ಲ. ಕುಮಾರಸ್ವಾಮಿ ಅವರು ನನ್ನನ್ನು ಶತ್ರು ಎಂದುಕೊಂಡು ದ್ವೇಷ ಸಾಧಿಸುತ್ತಲೇ ಬಂದರು. ಪ್ರೀತಿಯಿಂದ ನೋಡಿ, ಸ್ನೇಹಿತನಂತೆ ಕಂಡಿದ್ದರೆ ಏನೂ ಆಗುತ್ತಿರಲಿಲ್ಲ. ಕನಿಷ್ಠ ಪಕ್ಷ ಮೈತ್ರಿ ಪಕ್ಷದ ನಾಯಕನಂತೆಯೂ ನನ್ನನ್ನು ನಡೆಸಿಕೊಳ್ಳಲಿಲ್ಲ.
"ಹಾಗಾಗಿ ಇಷ್ಟೆಲ್ಲಾ ಸಮಸ್ಯೆ ಆದವು. ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳುವುದು. ಅದಕ್ಕೆ ನಾವೇನೂ ಮಾಡುವುದಕ್ಕೆ ಆಗುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
"ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಶಿಶು. ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರಕಾರವೇ ಇಲ್ಲದಂತಾಗಿದೆ. ಯಡಿಯೂರಪ್ಪ ದೆಹಲಿಯಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ದೆಹಲಿಗೆ ಬರೀ ಸುತ್ತಾಡುತ್ತಲೇ ಇದ್ದಾರೆ. ವಿಚಿತ್ರವೆಂದರೆ ಅಮಿತ್ ಶಾ ಅವರು ಯಡಿಯೂರಪ್ಪರನ್ನು ಭೇಟಿ ಸಹ ಮಾಡುತ್ತಿಲ್ಲ. ಸರಕಾರ ನಡೆಸಲು ಸ್ವಾತಂತ್ರ್ಯವನ್ನೂ ನೀಡುತ್ತಿಲ್ಲ. ಬಿಜೆಪಿಗೆ ಸರ್ವಾಧಿಕಾರದ ಆಡಳಿತದಲ್ಲಿ ನಂಬಿಕೆ ಜಾಸ್ತಿ" ಎಂದು ಆರೋಪಿಸಿದ್ದಾರೆ.
ನನ್ನ ಮೊದಲ ಶತ್ರು ಸಿದ್ದರಾಮಯ್ಯ: ಎಚ್. ಡಿ. ಕುಮಾರಸ್ವಾಮಿ
ಅನರ್ಹ ಶಾಸಕರು ಅತಂತ್ರರಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಅವರು ಅತಂತ್ರರಾಗಲಿ ಎಂದು ನಾವು ಶಾಸಕರನ್ನು ಅನರ್ಹಗೊಳಿಸುವಂತೆ ಮಾಡಿದ್ದು, ಅವರು ಅತಂತ್ರರಾಗಬೇಕು ಎನ್ನುವುದೇ ನಮ್ಮ ಆಶಯವಾಗಿತ್ತು" ಎಂದು ಅವರು ಕಿಡಿಕಾರಿದರು.
"ಇನ್ನು ರಾಜ್ಯದಲ್ಲಿ ತೀವ್ರ ನೆರೆ, ಬರ ಇದ್ದರೂ ಕೇಂದ್ರ ಸರಕಾರದಿಂದ ಒಂದು ರುಪಾಯಿ ಕೂಡ ರಾಜ್ಯಕ್ಕೆ ತರಲು ಮುಖ್ಯಮಂತ್ರಿಗೆ ಸಾಧ್ಯವಾಗಲಿಲ್ಲ. ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದ ಮತದಾರರು ಬಿಜೆಪಿಗೆ 113 ಬಹುಮತದ ಸಂಖ್ಯೆಯನ್ನು ನೀಡಿಲ್ಲ. ಹೈಕಮಾಂಡ್ ಗೂ ಯಡಿಯೂರಪ್ಪ ಬೇಕಾಗಿಲ್ಲ. ಇಬ್ಬರ ಮಧ್ಯದ ತಿಕ್ಕಾಟದಲ್ಲಿ ರಾಜ್ಯದಲ್ಲಿ ಒಂದು ತಿಂಗಳಿನಿಂದ ಸರಕಾರ ಇಲ್ಲದಂತಾಗಿದೆ" ಎಂದರು.
"ನಮಗೆ ಮೋಸ ಮಾಡಿ, ಬಿಜೆಪಿ ರಾಜ್ಯದಲ್ಲಿ ಸರಕಾರ ರಚಿಸಿದ್ದು, ಅಸಾಂವಿಧಾನಾತ್ಮಕವಾಗಿ ಅಧಿಕಾರ ಹಿಡಿದಿದೆ. ಹಿಂಬಾಗಿಲಿನಿಂದ ಕುದುರೆ ವ್ಯಾಪಾರ ಮಾಡಿ, ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳಿಗೆ ಅನರ್ಹ ಶಾಸಕರು, ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಯಲ್ಲೂ ತುಂಬಾ ಜನ ಅತೃಪ್ತರಿದ್ದಾರೆ. ಆದ್ದರಿಂದಲೇ ಅವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು.