ಕೈ ನಾಯಕರನ್ನು ಒಬ್ಬೊಬ್ಬರನ್ನಾಗಿ ಮುಗಿಸುವ ಕೆಲಸ ನಡೆಯುತ್ತಿದೆ: ಸಿದ್ದರಾಮಯ್ಯ
ಮೈಸೂರು, ಸೆಪ್ಟೆಂಬರ್ 4: "ಡಿ.ಕೆ ಶಿವಕುಮಾರ್ ಬಂಧನ ಬಿಜೆಪಿಯ ಸೇಡಿನ ರಾಜಕಾರಣದ ಉದಾಹರಣೆಯಾಗಿದೆ. ಕಾಂಗ್ರೆಸ್ ಪಕ್ಷ ಕಾನೂನಾತ್ಮಕವಾಗಿ ಡಿಕೆಶಿ ಪರ ನಿಲ್ಲುತ್ತದೆ" ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಡಿಕೆಶಿ ಬೆಂಬಲಿಗನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಕೆಶಿ ಅವರನ್ನು ರಾಜಕೀಯ ಸೇಡಿನಿಂದ ಬಂಧಿಸಲಾಗಿದೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಹೀಗೆ ಮಾಡುತ್ತಿದೆ. ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನಾಯಕರನ್ನು ಒಬ್ಬೊಬ್ಬರನ್ನಾಗಿ ಮುಗಿಸಲು ಹೀಗೆ ಮಾಡುತ್ತಿದ್ದಾರೆ. ಆದರೆ ಬಿಜೆಪಿಗೆ ಅದು ಸಾಧ್ಯವಿಲ್ಲ" ಎಂದು ವಾಗ್ದಾಳಿ ನಡೆಸಿದರು.
"ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಾವು ಪ್ರತಿಭಟನೆ ಮಾಡುತ್ತೇವೆ. ಅವರು ಯಾವುದೇ ಸಮನ್ಸ್ ಉಲ್ಲಂಘನೆ ಮಾಡಿಲ್ಲ. ಅವರನ್ನು ಬಂದಿಸುವ ಅವಶ್ಯಕತೆ ಇರಲಿಲ್ಲ. ಕೇಂದ್ರ ಸರ್ಕಾರ ಈ ಕೆಲಸ ಮಾಡುತ್ತಿದೆ. ಬಿಎಸ್ ಯಡಿಯೂರಪ್ಪನಿಗೆ ಗೊತ್ತಿಲ್ಲದೆ ಮಾಡ್ತಾರಾ...? ಅವರು ಇದಕ್ಕೂ ನಮಗೂ ಸಂಬಂಧ ಇಲ್ಲ ಅಂತಾರೆ" ಎಂದು ಬಿಜೆಪಿ ವಿರುದ್ದ ಸಿದ್ಧರಾಮಯ್ಯ ಆರೋಪ ಮಾಡಿದರು.
"ನಾಲ್ಕು ದಿನ ವಿಚಾರಣೆ ನಡೆಸಿದ್ದಾಗ ಉತ್ತರ ಕೊಡದವರು ಈಗ ಬಂಧನ ಮಾಡಿದರೆ ಉತ್ತರ ಕೊಡ್ಬಿಡ್ತಾರಾ?. ಚಿದಂಬರಂ ಹಾಗೂ ಡಿಕೆಶಿ ಕೇಸ್ ಗಳು ಬೇರೆ ಬೇರೆ. ಆದರೆ ಅವರಿಬ್ಬರ ಬಂಧನ ರಾಜಕೀಯ ಪ್ರೇರಿತ" ಎಂದು ಸಿದ್ಧರಾಮಯ್ಯ ಬಿಜೆಪಿ ನಾಯಕರ ಕುರಿತು ಮಾತನಾಡಿದರು.