ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ : ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಮೈಸೂರು, ಸೆಪ್ಟೆಂಬರ್ 5: ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೆಪ್ಟೆಂಬರ್ 4ರಂದು ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯರವರು ಸ್ಪಷ್ಟನೆ ನೀಡಿದ್ದಾರೆ.
"ನನಗೆ ಪುತ್ರ ಸಮಾನನಾದ ರವಿ ಕೆನ್ನೆಗೆ ಹೊಡೆದಿದ್ದಕ್ಕೆ ವಿಪರೀತ ಅರ್ಥವನ್ನು ಕಲ್ಪಿಸುವುದು ಬೇಡ. ಈ ಕುರಿತು ರವಿ ಹೇಳಿಕೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ನನ್ನ ತಂದೆ ಸಮಾನ, ತಮಾಷೆಗೆ ಹೊಡೆದರಷ್ಟೆ; ಕಪಾಳಮೋಕ್ಷ ಮಾಡಿಸಿಕೊಂಡ ಬೆಂಬಲಿಗನ ಸ್ಪಷ್ಟನೆ
"ನಾಡನಹಳ್ಳಿ ರವಿ ನಾನು ಬೆಳೆಸಿದ ಯುವಕ, ನನ್ನ ಮಗನಂತೆ. ಇಂತಹ ನೂರಾರು ಯುವಕರು ನನ್ನ ಜೊತೆ ಇರುತ್ತಾರೆ. ಅವರ ಜೊತೆ ನಾನು ಪ್ರೀತಿ- ಕೋಪ ತೋರುವ ರೀತಿಯೇ ಬೇರೆ. ಆ ಥರದ ಸಂಬಂಧ ನಮ್ಮ ನಡುವೆ ಇದೆ. ಅವನಿಗೆ ಹುಸಿಕೋಪದಿಂದ ಕೆನ್ನೆಗೆ ಹೊಡೆದಿದ್ದಷ್ಟೇ. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಈ ಬಗ್ಗೆ ರವಿ ಕೂಡ ತಿಳಿಸಿದ್ದಾರೆ" ಎಂದರು.
ಈ ಘಟನೆಯ ಕುರಿತು ನಿನ್ನೆ ರವಿ ಹೇಳಿಕೆ ನೀಡಿದ್ದರು. "ಸಿದ್ದರಾಮಯ್ಯ ಅವರು ಆಗಮಿಸಿದ್ದ ವೇಳೆ ಕಾರ್ಯಕ್ರಮಕ್ಕೆ ಬರುವಂತೆ ನಾನು ಕರೆದೆ. ಅದೇ ಸಮಯದಲ್ಲಿ ಮರೀಗೌಡರು ಫೋನ್ ನೀಡುವಂತೆ ತಿಳಿಸಿದರು. ಫೋನ್ ಕೊಟ್ಟಾಗ ನಾನು ಮತ್ತೊಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನಾನು ಬರಬೇಕಾ? ನಾನು ಬರೆದಿದ್ದರೆ ಆಗುವುದಿಲ್ಲವೇ, ನೀವೇ ಹೋಗಿ ಮಾಡಿ" ಎಂದರು. ನಾನು ಮತ್ತೆ ಫೋನ್ ನೀಡಲು ಮುಂದಾದಾಗ ಅವರು ಕೈ ಬೀಸಿದರು. ಅದನ್ನ ಮಾಧ್ಯಮದಲ್ಲಿ ಕೆನ್ನೆಗೆ ಹೊಡೆದರು ಎಂದು ದೊಡ್ಡ ವಿಷಯವಾಗಿ ಬಿಂಬಿಸಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ನನಗೆ ಹೊಡೆದರೂ, ಅವರು ನನ್ನ ತಂದೆ ಸಮಾನರು. ಗುರುಗಳು ಹಾಗೂ ಹಿರಿಯರು. ಅವರ ಮಾರ್ಗದರ್ಶನದಿಂದ ನಾನು ಉತ್ತಮ ಜೀವನ ಸಾಗಿಸುತ್ತಿದ್ದೇನೆ. ಅವರ ಆಶೀರ್ವಾದ ನನ್ನ ಮೇಲಿದೆ ಅದಕ್ಕೆ ವಿಶೇಷಾರ್ಥ ಕಲ್ಪಿಸುವುದು ಬೇಡ" ಎಂದು ತಿಳಿಸಿದ್ದರು.