"ಮುಂದಿನ ವಾರದಲ್ಲಿ ಎಲ್ಲವೂ ಇತ್ಯರ್ಥವಾಗುತ್ತದೆ"; ದಿನೇಶ್ ಗುಂಡೂರಾವ್
ಮೈಸೂರು, ಜನವರಿ 24: ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲದ ಕಾರಣಕ್ಕಾಗಿಯೇ ದೇಶದಲ್ಲಿ ಇಷ್ಟೊಂದು ಸಮಸ್ಯೆ ಉದ್ಭವವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುತ್ತೂರು ಜಾತ್ರೆಗೆ ಪ್ರತಿ ವರ್ಷವೂ ಸ್ವಾಮೀಜಿಯವರು ಕರೆಯುತ್ತಾರೆ. ಈ ವರ್ಷವೂ ಕರೆದಿದ್ದಾರೆ. ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಖಂಡಿತವಾಗಿಯೂ ಆದಷ್ಟು ಬೇಗ ಇತ್ಯರ್ಥವಾಗುವ ಅವಶ್ಯಕತೆಯಿದೆ. ನಾನೂ ವರಿಷ್ಠರ ಜೊತೆ ಮಾತನಾಡಿದ್ದೇನೆ. ಬಹುಶಃ ಮುಂದಿನ ವಾರದಲ್ಲಿ ಎಲ್ಲ ತೀರ್ಮಾನವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವಾರ ಕೆಪಿಸಿಸಿ ಅಧ್ಯಕ್ಷರ ನೇಮಕ?
"ಅಧ್ಯಕ್ಷ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾವುದೇ ಅಭಿಪ್ರಾಯದ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗಬೇಕು, ಅದು ಆಗುತ್ತಿದೆ. ಎಲ್ಲರ ಬಗ್ಗೆಯೂ ಪರ-ವಿರೋಧ ಅಭಿಪ್ರಾಯವಿರುತ್ತದೆ. ಅದು ಸಹಜ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಅವರೇನು ನಿರ್ಧಾರ ತಗೋತಾರೋ ಅದನ್ನು ಒಪ್ಪಿಕೊಳ್ಳಲು ಎಲ್ಲರೂ ಸಿದ್ಧರಿದ್ದೇವೆ. ಆ ಕಾರಣದಿಂದ ಮುಂದೆ ಹೋಗಿರಬಹುದೇ ಹೊರತು ಬೇರೇನಿಲ್ಲ. ಮುಂದಿನ ವಾರ ಎಲ್ಲವೂ ತೀರ್ಮಾನವಾಗುವ ಭರವಸೆ ಇದೆ" ಎಂದರು.
'ಮಂಗಳೂರು ಬಾಂಬ್ ಆರೋಪಿ ಪತ್ತೆ; ಬಿಜೆಪಿಗೆ ನಿರಾಸೆ'
"ಅಧಿಕೃತ ಹೇಳಿಕೆ ನೀಡಿಲ್ಲ"
ನಾಲ್ಕು ಮಂದಿ ಕಾರ್ಯಾಧ್ಯಕ್ಷರಾಗುತ್ತಿರುವುದು ನಿಜವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಇದೆಲ್ಲ ಊಹಾಪೋಹ, ಯಾರೋ ಹೇಳಿದ್ರು, ಯಾರೋ ಬರೆದ್ರು, ಅಧಿಕೃತವಾಗಿ ಯಾರೂ ಹೇಳಿಲ್ಲ. ಕಾರ್ಯಾಧ್ಯಕ್ಷರು ಹಿಂದೆ ಎಲ್ಲರೂ ಆಗಿದ್ದಾರೆ, ನಾನು ಆಗಿದ್ದೆ, ಶಿವಕುಮಾರ್ ಆಗಿದ್ದರು. ಎಸ್.ಆರ್.ಪಾಟೀಲ್ ಆಗಿದ್ದರು. ಇದು ಹೊಸದೇನಲ್ಲ. ಈ ಚರ್ಚೆಗಳು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗತಕ್ಕಂಥದ್ದೇ ಹೊರತು ಯಾರೂ ಅಧಿಕೃತವಾಗಿ ಹೇಳಿಲ್ಲ. ಈ ಸುದ್ದಿ ಎಲ್ಲಿಂದ ಬಂತೋ ಗೊತ್ತಿಲ್ಲ. ಈ ವಿಚಾರ ಬಹಿರಂಗವಾಗಿ ಚರ್ಚೆಯಾಗುವ ಅವಶ್ಯಕತೆಯಿಲ್ಲ ಎಂದರು.
ಮೂವರು ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿದ ಕೆಪಿಸಿಸಿ
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ
ಬಿಜೆಪಿ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, "ಅವರ ಸಮಸ್ಯೆಯೇ ಬೇರೆ. ಕೇಂದ್ರದವರು ಮುಖ್ಯಮಂತ್ರಿಗಳಿಗೆ ಸಮಯ ನೀಡುತ್ತಿಲ್ಲ. ಮಂತ್ರಿ ಮಂಡಲ ರಚನೆ ಆಗೋದು ಮಂತ್ರಿಯಾಗೋದಕ್ಕಲ್ಲ. ಜನರಿಗೆ ಯೋಜನೆಗಳನ್ನು ಮುಟ್ಟಿಸಬೇಕು. ಇಲಾಖೆಗಳನ್ನು ಜವಾಬ್ದಾರಿಯುತವಾಗಿ ನಡೆಸಬೇಕು. ಒಳ್ಳೊಳ್ಳೆ ಸಚಿವರು ಬೇಕು. ಅದು ಮುಖ್ಯ. ಇದು ಅಭಿವೃದ್ಧಿಯ ಪ್ರಶ್ನೆ. ಇದು ಯಾವುದೇ ಪಕ್ಷ ಸಂಘಟನೆಯ ವಿಚಾರವಲ್ಲ. ರಾಜ್ಯದ ಅಭಿವೃದ್ಧಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಒಳ್ಳೆಯ ಮಂತ್ರಿ ಮಂಡಲ ರಚನೆಯಾಗಬೇಕು. ಎಷ್ಟು ದಿನ ಅಂತ ಖಾಲಿ ಇಟ್ಟು ಒಬ್ಬೊಬ್ಬರೇ ಮೂರ್ನಾಲ್ಕು ಖಾತೆ ಇಟ್ಕೊಂಡು ಕೆಲಸ ಮಾಡಲು ಆಗುತ್ತದೆ? ಇವತ್ತು ಕರ್ನಾಟಕದಲ್ಲಿ ಏನೂ ಕೆಲಸ ಆಗುತ್ತಿಲ್ಲ. ಆಡಳಿತ ಇಲ್ಲ, ಮಂತ್ರಿಗಳಿಲ್ಲ. ಪಕ್ಷದಲ್ಲೇ ಭಿನ್ನಾಭಿಪ್ರಾಯ. ಕರ್ನಾಟಕಕ್ಕೇ ಹಿನ್ನಡೆಯಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಸಮಾಜದಲ್ಲಿ ಶಾಂತಿ, ನೆಮ್ಮದಿಯೇ ಇಲ್ಲ"
ಜಾತ್ಯಾತೀತ ವ್ಯವಸ್ಥೆಯಲ್ಲಿ ನಾವಿರಬೇಕು. ಧರ್ಮ, ಜಾತಿ ಆಧಾರಿತವಾಗಿರದೇ ವಿಭಿನ್ನವಾಗಿರಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ತಗೊಂಡು ಹೋಗುವ ಕೆಲಸವಾಗಬೇಕು. ಸಮಾಜದಲ್ಲಿ ಶಾಂತಿ ನೆಮ್ಮದಿ ಇಲ್ಲ. ದೇಶದಲ್ಲಿ ಅದಕ್ಕಾಗಿಯೇ ಇಷ್ಟೊಂದು ಸಮಸ್ಯೆಗಳು ಉದ್ಭವವಾಗಿದೆ ಎಂದರು.
ಮಂಗಳೂರು ಬಾಂಬ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹೇಗೆ ಅಂದರೆ, ಮುಸ್ಲಿಂ ಯಾರಾದರೂ ಇದ್ದರೆ ಎಲ್ಲರೂ ಬೀದಿಗೆ ಬಂದ್ಬಿಡ್ತಾರೆ. ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಟ್ವೀಟ್ ಮೇಲೆ ಟ್ವೀಟ್ ಮಾಡೋದು ಅದು, ಇದೂ ಅಂತ. ಈಗ ಆದಿತ್ಯರಾವ್ ಹೆಸರು ಬಂತಲ್ಲ, ಅದಕ್ಕೆ ಮಾನಸಿಕ ಅಸ್ವಸ್ಥ ಇರಬೇಕು. ಅವನಿಗೆ ಬೇರೇ ಏನೋ ಆಗಿರಬೇಕು ಅಂತ ಅವರೇ ಹೇಳಿಕೊಂಡರು. ತನಿಖೆ ಇನ್ನೂ ಮುಗಿದೇ ಇಲ್ಲ. ಎಷ್ಟಿದೆ ನೋಡಿ ವ್ಯತ್ಯಾಸ. ಅವರ ನಡವಳಿಕೆಯೇ ಬೇರೆ. ತಪ್ಪು ಯಾರೇ ಮಾಡಿರಲಿ. ಯಾರನ್ನೂ ರಕ್ಷಿಸಿಕೊಳ್ಳಬಾರದು. ಇಂತಹ ಕೃತ್ಯಗಳಿಗೆ ಅವರು ಯಾರೇ ಆಗಿರಲಿ ಕ್ರಮ ವಹಿಸುವುದು ಮುಖ್ಯ. ರಾಜಕೀಯ ಬಣ್ಣ ಕಟ್ಟಲು ಹೋದರೆ ಒಳ್ಳೆಯದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.