ಈ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು, ಆಗಸ್ಟ್ 13: ಕೋವಿಡ್- 19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಸ್ಟ್ 13 ಹಾಗೂ 20 ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ದಿನಾಂಕಗಳಂದು ಪೂರ್ತಿದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ದೇವಾಲಯಕ್ಕೆ ಬರುವ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇವಾಲಯದ ಸಂಪ್ರದಾಯದಂತೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು, ಸಿಬ್ಬಂದಿಗಳು ಮಾತ್ರ ನಡೆಸಲು ಅನುಮತಿ ನೀಡಲಾಗಿದೆ. ದೇವಾಲಯದಲ್ಲಿ ದೇವಾಲಯದ ವತಿಯಿಂದಾಗಲಿ ಅಥವಾ ದಾನಿಗಳ ವತಿಯಿಂದಾಗಲೀ ದಾಸೋಹ, ಊಟದ ವ್ಯವಸ್ಥೆ ಹಾಗೂ ಪ್ರಸಾದ ವಿತರಣೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಿರುವ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟ ಗ್ರಾಮಸ್ಥರು ನಿಷೇಧಿತ ದಿನಾಂಕಗಳಂದು ಪೂರ್ತಿದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ವಾಹನ ಬಳಸುವ ಅನಿವಾರ್ಯವಿದ್ದಲ್ಲಿ ಚಾಮುಂಡಿ ಬೆಟ್ಟದ ವಾಸಸ್ಥಳ ಗುರುತಿನ ಚೀಟಿಯನ್ನು ಬಳಸಬಹುದು.
ದೇವಾಲಯದಲ್ಲಿ ನಡೆದು ಬಂದಿರುವ ಸಂಪ್ರದಾಯ ಮತ್ತು ಪದ್ಧತಿಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದರಿಂದ ಇದಕ್ಕೆ ಅಗತ್ಯವಿರುವವರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಮಾತ್ರ ದೇವಾಲಯದಲ್ಲಿ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಬಹುದು.
ಕೋವಿಡ್- 19 ಸಾಂಕ್ರಾಮಿಕ ರೋಗ ಹರಡದಂತೆ ರಾಜ್ಯ ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ದೇವಾಲಯದ ರೂಢಿ ಸಂಪ್ರದಾಯದಂತೆ ಮಂಗಳಾರತಿಯು ಮುಕ್ತಾಯಗೊಂಡ ತಕ್ಷಣ ದೇವಾಲಯದ ಬಾಗಿಲನ್ನು ಮುಚ್ಚಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರಾವಣ ಮಾಸದ ಶುಕ್ಲಪಕ್ಷ, ಪಂಚಮಿ ತಿಥಿಯಲ್ಲಿ ಬರುವ ನಾಗರ ಪಂಚಮಿ ಹಬ್ಬ ಹಾಗೂ ಮೊದಲ ಶ್ರಾವಣ ಶುಕ್ರವಾರ ಹಿನ್ನೆಲೆ ಇಂದು ಭಕ್ತರು ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಆದರೆ ಕೊರೊನಾ ಮೂರನೇ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗಿದೆ. ಆದರೂ ಕೆಲವರು ದೇವಾಲಯದ ಬಾಗಿಲುಗಳ ಮುಂದೆಯೇ ಪೂಜೆ ಮಾಡಿ ಹಾಲೆರೆದು ಹೋಗುತ್ತಿದ್ದಾರೆ.
ಮೈಸೂರು- ಚೆನ್ನೈ ನಡುವೆ ವಿಮಾನ ಹಾರಾಟ ಆರಂಭ
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಶುಕ್ರವಾರದಿಂದ ಮೈಸೂರು ಹಾಗೂ ತಮಿಳುನಾಡಿನ ಚೆನ್ನೈ ನಡುವೆ ವಿಮಾನ ಹಾರಾಟ ಮತ್ತೆ ಆರಂಭವಾಯಿತು.
ಈ ಮಾರ್ಗದಲ್ಲಿ ವಾರದಲ್ಲಿ 3 ದಿನ ಅಂದರೆ ಸೋಮವಾರ, ಬುಧವಾರ, ಮತ್ತು ಶುಕ್ರವಾರದಂದು ಇಂಡಿಗೋ ವಿಮಾನ ಹಾರಾಟ ಮಾಡಲಿದೆ. ಸಂಜೆ 4.35 ರಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದೆ. ನಂತರ ಮಾರನೇ ದಿನ ಮಧ್ಯಾಹ್ನ 2.50ಕ್ಕೆ ಚೆನೈ ನಿಲ್ದಾಣದಿಂದ ಹೊರಡುವ ವಿಮಾನ ಸಂಜೆ 4.15ಕ್ಕೆ ಮೈಸೂರಿಗೆ ಆಗಮಿಸಲಿದೆ.
ಈ ಹಿಂದೆ ಇದೇ ಮಾರ್ಗದಲ್ಲಿ ವಿಮಾನ ಹಾರಾಟ ನಡೆಯುತ್ತಿತ್ತು. ಆದರೆ ಮೈಸೂರು ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಕೊರೊನಾ ಸೋಂಕು ಹರಡುವಿಕೆಯ ಆರ್ಭಟ ತೀವ್ರವಾಗಿದ್ದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ಮೈಸೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಕಾರಣ, ಪ್ರಯಾಣಿಕರ ಬೇಡಿಕೆಯಂತೆ ಮತ್ತೆ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗಿದೆ.