ಮೈಸೂರು: ಡ್ರೋನ್ ಸರ್ವೇ ವೇಳೆ ಗ್ರಾ.ಪಂ ಕಾರ್ಯದರ್ಶಿಗೆ ಛತ್ರಿ ಹಿಡಿದಿರುವ ನೌಕರ
ಮೈಸೂರು, ಅಕ್ಟೋಬರ್ 20: ಡ್ರೋನ್ ಸರ್ವೇ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರಿಗೆ ಕೆಳ ದರ್ಜೆಯ ನೌಕರನೊಬ್ಬ ಕೊಡೆ ಹಿಡಿದು ನಿಂತಿರುವ ಫೋಟೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಮೈಸೂರಿನ ಗುಂಗ್ರಲ್ ಛತ್ರದ ಗ್ರಾ.ಪಂ ಮಹಿಳಾ ಕಾರ್ಯದರ್ಶಿಯೊಬ್ಬರು ಡ್ರೋನ್ ಸರ್ವೇಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ನೌಕರ ಕೊಡೆ ಹಿಡಿದಿದ್ದ. ಇವರು ಮಾಸ್ಕ್ ಕೂಡ ಧರಿಸಿಲ್ಲ. ಈ ಚಿತ್ರ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ.
ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಆಸ್ಪತ್ರೆಗೆ ದಾಖಲು
ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಜ್ಯೋತಿ ಆತ್ಮ ಎಂಬ ನೆಟ್ಟಿಗರು, ""ತಮ್ಮ್ ಕೆಳ ದರ್ಜೆಯ ವ್ಯಕ್ತಿಗಳನ್ನು ಈ ಅಧಿಕಾರಿಗಳು ನೋಡೋ ರೀತಿ ಇದು. ಕಾರ್ಯದರ್ಶಿ ಬದಲು ಫಿಲ್ಮ್ ಆ್ಯಕ್ಟರ್ ಆಗಬೇಕಿತ್ತು. ಒಬ್ಬ ಪಿಡಿಒ ನೋಡ್ರಪ್ಪ ಅವರ ಶೋಕಿನ. ಮಾಸ್ಕ್ ಇಲ್ಲ. ಅವರ ಕೈಲಿ ಛತ್ರಿ ಇಡಿಯೋಕು ಶಕ್ತಿ ಇಲ್ಲ ಪಾಪ, ಇವರು ಬ್ರಿಟಿಷ್ ಆಡಳಿತಾಧಿಕಾರಿ ಇಂತಹವರನ್ನು ಹೇಳೋರೂ ಇಲ್ಲ, ಕೇಳೋರು ಇಲ್ಲ. ತನ್ನ ತಾನು ರಕ್ಷಣೆ ಮಾಡಿಕೊಳ್ಳೋಕೆ ಛತ್ರಿ ಇಡ್ಕೊಳೋಕ್ಕೆ ಆಗದಿರುವವರು ಇನ್ನು ಪೆನ್ ಇಡ್ಕೊಂಡು ಗ್ರಾಮ ಪಂಚಾಯತಿ ಉದ್ಧಾರ ಮಾಡ್ತಾರೆ. ಇದೆ ನಮ್ಮ ವ್ಯವಸ್ಥೆ'' ಎಂದು ಟೀಕಿಸಿದ್ದಾರೆ.
ʻಇಂತವರು ಎಷ್ಟೇ ವಿದ್ಯಾವಂತರು ಆದರೂ ವ್ಯಕ್ತಿತ್ವದಲ್ಲಿ ಅವಿದ್ಯಾವಂತರು. ನಾಗರಿಕ ಸಮಾಜದ ಅನಾಗರಿಕರುʼ ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ʻಕೆಲ ಸಂದರ್ಭದಲ್ಲಿ ಕೆಲವು ಚಿತ್ರಗಳು ನಮ್ಮನ್ನು ದಾರಿತಪ್ಪಿಸುತ್ತಿವೆ. ವಾಸ್ತವವಾಗಿ ನಾವು ಗ್ರಾಮೀಣ ಪ್ರದೇಶದಲ್ಲಿ ಸ್ವಾಮಿತ್ವ ಕಾರ್ಡ್ ನೀಡುವ ಡ್ರೋನ್ ಏರಿಯಲ್ ಸಮೀಕ್ಷೆಯನ್ನು ಮಾಡುತ್ತಿದ್ದೇವೆ. ಈ ಡ್ರೋನ್ಗಳನ್ನು ನೆರಳಿನಲ್ಲಿ ಯಾವಾಗಲೂ ಬಳಸಬೇಕಾಗುತ್ತದೆ. ಆ ಕಾರಣದಿಂದಾಗಿ ಛತ್ರಿಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರವೇ ಸ್ಪಷ್ಟನೆ ನೀಡಲಿದೆʼ ಎಂದು ಕೃಷ್ಣಕುಮಾರ್ ಸಿ.ಆರ್. ಸ್ಪಷ್ಟಪಡಿಸಿದ್ದಾರೆ.
ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಟ್ಯಾಗ್ ಮಾಡಿ, ""ಹೈಟೆಕ್ ಪಿಡಿಒ ಮೇಡಮ್ನ ಅವರೂ ಸ್ವಲ್ಪ ನೋಡಲಿ, ಗ್ರಾಮ ಪಂಚಾಯತಿಗಳನ್ನು ಹೈಟೆಕ್ ಮಾಡಬೇಕಿದೆ ಅಧಿಕಾರಿಗಳನ್ನಲ್ಲʼ ಎಂದು ಮತ್ತೊಬ್ಬರು ಟ್ವಿಟಿಗರು ಕುಟುಕಿದ್ದಾರೆ.
ಚಿತ್ರದಲ್ಲಿರುವವರು ಗ್ರಾ.ಪಂ ಕಾರ್ಯದರ್ಶಿಯಾಗಿದ್ದು, ಟ್ವಿಟ್ಟರ್ ನಲ್ಲಿ ಕೆಲವರು ಪಿಡಿಒ ಎಂದು ಭಾವಿಸಿ ಟ್ವೀಟ್ ಮಾಡಿದ್ದಾರೆ.