ಮೈಸೂರಿನಲ್ಲಿ ಮಳೆ ಹಾನಿಗೀಡಾದ ಪ್ರದೇಶಗಳಿಗೆ ತುರ್ತು ಪರಿಹಾರ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು, ಆಗಸ್ಟ್ 07: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮಳೆ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಸಭೆಯಲ್ಲಿ ಭಾಗವಹಿಸಿದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಮ್ಮ ಜಿಲ್ಲೆಯ ಪರಿಸ್ಥಿತಿ ಕುರಿತು ಸಿಎಂ ಗಮನಕ್ಕೆ ತಂದರು.
ಮೈಸೂರು ನಗರ ಭಾಗಕ್ಕಿಂತ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹಾನಿ ಆಗಿದೆ. ಹಾನಿ ಗೊಳಗಾದವರಿಗೆ ಜಿಲ್ಲೆಯಲ್ಲಿ ತ್ವರಿತವಾಗಿ ಪರಿಹಾರ ನೀಡಲಾಗುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರದಲ್ಲಿ ಮಳೆಯಿಂದ ಹಾನಿ ಆಗಿದ್ದು, ಆಗಸ್ಟ್ 7ರಂದು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
Breaking; ಮೈಸೂರು ದಸರಾ 2022; ಗಜಪಯಣಕ್ಕೆ ಚಾಲನೆ
ಮಳೆ ಹಾನಿ ಕುರಿತು ಪರಿಹಾರ ನೀಡುವಂತೆ ಸಚಿವರು ಕೋರಿದಾಗ ಜಿಲ್ಲೆಗೆ 15 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೆ 10 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಹೇಳಿದರು.
ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 5ರವರೆಗೆ 1,612 ಮನೆಗಳಿಗೆ ಹಾನಿ ಆಗಿದೆ. ಹುಣಸೂರು ತಾಲೂಕಿನಲ್ಲಿ ಒಂದು ಪ್ರಾಣ ಹಾನಿಯಾಗಿದ್ದು, ತಕ್ಷಣವೇ ಮೃತ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ಹಣ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.
ಪಿರಿಯಾಪಟ್ಟಣ, ಹುಣಸೂರು, ಸರಗೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕುಗಳಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿ ಪ್ರಮಾಣದ ಆಧಾರದ ಮೇಲೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. 199 ಹೆಕ್ಟೇರ್ ಕೃಷಿ ಬೆಳೆ, 221 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 11 ಜಾನುವಾರುಗಳಿಗೆ ಹಾನಿಯಾಗಿದ್ದು ಪರಿಹಾರ ಅದಕ್ಕೂ ನೀಡಲಾಗಿದೆ ಎಂದರು.