ಮನೆತೊರೆದ ಪ್ರೇಮಿಗಳಿಗೆ ಶ್ರಾವಣ ಶುಕ್ರವಾರದಂದು ನಿಖಾಹ್
ಮೈಸೂರು, ಆಗಸ್ಟ್ 06 : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ಧರ್ಮವಾದರೂ ಪೋಷಕರು ಮಾತ್ರ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಮನೆಬಿಟ್ಟು ಬಂದ ಪ್ರೇಮಿಗಳಿಬ್ಬರಿಗೆ ಮೈಸೂರಿನ ಒಡನಾಡಿ ಸಂಸ್ಥೆ ಮುಂದೆ ನಿಂತು ಸರಳವಾಗಿ ವಿವಾಹ ಮಾಡುವುದರೊಂದಿಗೆ ದಾಂಪತ್ಯ ಜೀವನ ನಡೆಸಲು ಅನುವುಮಾಡಿಕೊಟ್ಟಿದೆ.
ಸೈಯದ್ ರುಬೀನ ನಯೀಮ ಮತ್ತು ಪೈರೋಜ್ ಪಾಷಾ ಎಂಬುವರೇ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳಾಗಿದ್ದಾರೆ. ಶ್ರಾವಣ ಶುಕ್ರವಾರದ ಶುಭದಿನದಂದು ಪ್ರೇಮಿಗಳಿಬ್ಬರೂ ಸತಿಪತಿಗಳಾಗಿದ್ದಾರೆ. [ಗಂಡನಿಗೇ ತಲಾಕ್ ಹೇಳಿದ ದಿಟ್ಟ ಹೆಣ್ಣು ಮೊಹಸೀನಾ!]
ನಾವು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಆದರೆ ನಾವು ಮದುವೆಯಾಗಲು ಮನೆಯವರು ಒಪ್ಪುತ್ತಿಲ್ಲ. ನೀವೇ ಮದುವೆ ಮಾಡಿಸಿ ಎಂದು ಪ್ರೇಮಿಗಳಿಬ್ಬರು ಒಡನಾಡಿಯ ಮೊರೆ ಹೋಗಿದ್ದರು. ಅದಕ್ಕೂ ಮೊದಲು ಉದಯಗಿರಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು. [ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ]
ಪ್ರೇಮಿಗಳಿಬ್ಬರು ಪ್ರಾಪ್ತ ವಯಸ್ಕರಾಗಿದ್ದರಿಂದ ಮದುವೆ ಮಾಡಲು ಅಡ್ಡಿಯಿರಲಿಲ್ಲ. ಅವರ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಒಡನಾಡಿಯು ಯುವತಿಗೆ ಕಳೆದ ಮೂರು ದಿನಗಳಿಂದ ಸಂಸ್ಥೆಯಲ್ಲೇ ಆಶ್ರಯ ನೀಡಿ, ಪ್ರೇಮಿಗಳ ಪೋಷಕರನ್ನು ಸಂಪರ್ಕಿಸಿ, ಅವರಿಗೆ ವಿಚಾರವನ್ನು ತಿಳಿಸಿ, ಅವರ ಮನವೊಲಿಸುವ ಪ್ರಯತ್ನವನ್ನು ಮಾಡಿತ್ತು. ಕೊನೆಗೂ ಸಂಸ್ಥೆಯ ಪ್ರಯತ್ನ ಫಲಪ್ರದವಾಗಿ ಪೋಷಕರು ಮದುವೆಗೆ ಸಮ್ಮತಿ ನೀಡಿದರು.
ಯುವತಿಯ ಇಚ್ಛೆಯಂತೆ ಒಡನಾಡಿ ಸಂಸ್ಥೆಯಲ್ಲೇ ಸರಳ ವಿವಾಹ ಮಾಡಲಾಯಿತು. ಕೊನೆಗೂ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಅವರ ಜೀವನ ಸುಖಮಯವಾಗಿರಲೆಂದು ನಾವೆಲ್ಲರೂ ಹಾರೈಸೋಣ. [ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ!]