11 ಸಾವಿರ ಸವಾರರನ್ನು ಹೊಂದಿದ ಮಹತ್ವಾಕಾಂಕ್ಷಿ ಟ್ರಿಣ್ –ಟ್ರಿಣ್ ಯೋಜನೆ
ಮೈಸೂರು, ಜನವರಿ 29: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಈಚೆಗಷ್ಟೇ ಜಾರಿಗೊಂಡ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಪ್ರಸ್ತುತ 11 ಸಾವಿರ ಮಂದಿ ಸದಸ್ಯತ್ವ ಪಡೆದು ಸೈಕಲ್ ಬಳಕೆ ಮಾಡುತ್ತಿದ್ದಾರೆ.
ಟ್ರಿಣ್ - ಟ್ರಿಣ್ ಎಂದೇ ಖ್ಯಾತಿಯಾಗಿರುವ ಈ ವ್ಯವಸ್ಥೆಯಲ್ಲಿ ಶೇ.40ರಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಯೋಗ ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅದರಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ವಾಹನ ಸೌಲಭ್ಯವಿಲ್ಲದೆ ಪರದಾಡುವ ಜನತೆಗೆ ಅನುಕೂಲ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಟ್ರಿಣ್ -ಟ್ರಿಣ್ : ಇನ್ಮುಂದೆ ಪ್ರತಿನಿತ್ಯ 30 ನಿಮಿಷ ಫ್ರೀ ರೈಡ್
2017ರ ಜೂ.4ರಂದು ಈ ವ್ಯವಸ್ಥೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆ ಮೂಲಕ ದೇಶದ ಮೊಟ್ಟ ಮೊದಲ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆಗೆ ಚಾಲನೆ ದೊರೆತು ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ಇದೀಗ ಪ್ರತಿದಿನ ಸುಮಾರು 1200 ಮಂದಿ ಈ ಟ್ರಿಣ್ - ಟ್ರಿಣ್ ಬೈಸಿಕಲ್ ಸೇವೆ ಬಳಸಿಕೊಳ್ಳುತ್ತಿದ್ದು, ಒಟ್ಟು 450 ಸೈಕಲ್ ಗಳು 11 ಲಕ್ಷ ಕಿಲೋಮೀಟರ್ ಚಲಿಸಿವೆ.
ಮೈಸೂರು ಮಹಾನಗರ ಪಾಲಿಕೆ, ನಗರ ಭೂಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವಿಶ್ವ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಜಾರಿಗೊಂಡಿದೆ.
52 ವಿನಿಯೋಗ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ
ಈ ವ್ಯವಸ್ಥೆಯ ನಿರ್ವಹಣೆಯನ್ನು ಟೆಂಡರ್ ಮೂಲಕ ಗ್ರೀನ್ ವ್ಹೀಲ್ ರೈಡ್ ಕಂಪನಿ ಪಡೆದುಕೊಳ್ಳುತ್ತಿದೆ. ಟ್ರಿಣ್ -ಟ್ರಿಣ್ ಸೇವೆಗಾಗಿ ಮೈಸೂರು ನಗರದಲ್ಲಿ 52 ವಿನಿಯೋಗ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಆ ಮೂಲಕ ಸದ್ಯಕ್ಕೆ 450 ಸೈಕಲ್ ಗಳನ್ನು ಸೇವೆಗೆ ನೀಡಲಾಗುತ್ತಿದೆ.
30 ಸೈಕಲ್ ಗಳಿಗೆ ಗೇರ್ ವ್ಯವಸ್ಥೆ
ಸವಾರರು ಯಾವುದೇ ಕೇಂದ್ರದಲ್ಲಿ ಸೈಕಲ್ ಪಡೆದು, ಸವಾರಿ ಮುಗಿದ ಬಳಿಕ ತಮಗೆ ಸಮೀಪದ ಯಾವುದೇ ಕೇಂದ್ರದಲ್ಲಿ ಹಿಂದಿರುಗಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಸೈಕಲ್ ಗಳ ಪೈಕಿ 30 ಸೈಕಲ್ ಗಳಿಗೆ ಗೇರ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಈ ಸೈಕಲ್ ಗಳನ್ನು ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಲು ಅನುಕೂಲವಾಗಲೆಂದು ರೂಪಿಸಲಾಗಿದೆ. ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ವಿನಿಯೋಗ ಸೇವಾ ಕೇಂದ್ರದಲ್ಲಿ ಈ ಸೈಕಲ್ ಗಳು ದೊರೆಯಲಿವೆ.
ಮೈಸೂರಿನ ಟ್ರಿಣ್ ಟ್ರಿಣ್ ಗೆ ಮತ್ತೊಂದು ಪ್ರಶಸ್ತಿಯ ಮುಕುಟ
ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿತ
ಅಷ್ಟೇ ಅಲ್ಲ, ಒಂದೂವರೆ ವರ್ಷದಲ್ಲಿ ಟ್ರಿಣ್ - ಟ್ರಿಣ್ ಸೈಕಲ್ ನಿಂದ 11 ಮೆಟ್ರಿಕ್ ಟನ್ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿತಗೊಂಡಿದೆ ಎನ್ನುತ್ತಾರೆ ಪಿಬಿಎಸ್ ಉದ್ಯೋಗಿ ಭೂಷಣ್.
ಆರೋಗ್ಯಕರ ಯೋಜನೆ
ಅಧಿಕ ಪ್ರಮಾಣದ ಇಂಗಾಲದ ಡೆ ಆಕ್ಸೆಡ್ ಹೊರಸೂಸುವಿಕೆಯಿಂದ ಜಾಗತಿಕ ತಾಪಮಾನ ಏರಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಎದುರಾಗಬಹುದಾದ ಅಪಾಯಕಾರಿ ಸನ್ನಿವೇಶಗಳು ಪ್ರಸ್ತುತ ಹೆಚ್ಚು ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದು ಮಹತ್ವದ ಸಾಧನೆ ಎಂದು ಪರಿಗಣಿಸಬಹುದು. ಒಟ್ಟಾರೆ ಈ ಟ್ರಿಣ್ -ಟ್ರಿಣ್ ಯೋಜನೆ ಆರೋಗ್ಯಕರ ಹಾಗೂ ಉಳಿತಾಯಕಾರಿ ಯೋಜನೆಯೇ ಸರಿ.