ಮುಚ್ಚಿದ ಆನೆ ಕಂದಕ; ಆರಾಮಾಗಿ ಒಳನುಸುಳುತ್ತಿವೆ ಕಾಡಾನೆಗಳು
ಮೈಸೂರು, ಡಿಸೆಂಬರ್ 18: ಈ ಬಾರಿ ಉತ್ತಮವಾಗಿ ಮಳೆ ಸುರಿದ ಕಾರಣ ಕೆರೆಕಟ್ಟೆಗಳು ತುಂಬಿವೆ. ಕಳೆದ ಕೆಲ ವರ್ಷಗಳಿಂದ ನೀರಿನ ತೊಂದರೆಯಿಂದಾಗಿ ಕೃಷಿ ಮಾಡದೆ ತೆಪ್ಪಗೆ ಕುಳಿತಿದ್ದ ರೈತರು ಇದೀಗ ತಮ್ಮ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ಬಾಳೆ, ತರಕಾರಿಗಳನ್ನು ಬೆಳೆಯಲು ಮುಂದಾಗಿದ್ದಾರೆ. ಆದರೆ ಕಾಡಾನೆಗಳ ಹಾವಳಿಯಿಂದಾಗಿ ತಾವು ಬೆಳೆದ ಬೆಳೆಯನ್ನು ಜಮೀನಿನಿಂದ ಮನೆಗೆ ಸಲೀಸಾಗಿ ಕೊಂಡೊಯ್ಯುತ್ತೇವೆಂಬ ನಂಬಿಕೆಯೇ ಇಲ್ಲದಾಗಿದೆ.
ಅರಣ್ಯದಂಚಿನಲ್ಲಿರುವ ಗ್ರಾಮಗಳಲ್ಲಿ ಕೃಷಿ ಮಾಡುವ ಹೆಚ್ಚಿನವರು ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಇಲ್ಲಿ ಬಹಳಷ್ಟು ಬಡ ರೈತರೇ ವಾಸವಾಗಿದ್ದು, ಅವರಿಗೆ ಕೃಷಿ ಹೊರತುಪಡಿಸಿದರೆ ಬದುಕಲು ಬೇರೆ ಮಾರ್ಗಗಳಿಲ್ಲ. ಹೀಗಾಗಿ ಕಾಲಕ್ಕೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳೆ ಬೆಳೆಯುತ್ತಿದ್ದು, ಅದು ಕೈಗೆ ಬರಬೇಕೆನ್ನುವಷ್ಟರಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಜಮೀನಿಗೆ ನುಗ್ಗಿ ಫಸಲನ್ನೆಲ್ಲ ತಿಂದು, ತುಳಿದು ನಾಶ ಮಾಡಿ ಬಿಡುತ್ತಿವೆ. ಈ ಸಮಸ್ಯೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಗ್ರಾಮಗಳ ರೈತರು ಅನುಭವಿಸುತ್ತಿದ್ದಾರೆ.
ಚಿತ್ರದುರ್ಗ; ವಾರದಿಂದ ಬೀಡುಬಿಟ್ಟಿದ್ದ ಒಂಟಿ ಸಲಗ ಕೊನೆಗೂ ಸೆರೆ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ, ಕಾಡಾನೆಗಳು ನಾಡಿನೊಳಗೆ ನುಸುಳಲು, ಅಲ್ಲಿ ಸುತ್ತ ತೆಗೆದಿರುವ ಆನೆ ಕಂದಕಗಳು ಮುಚ್ಚಿ ಹೋಗಿರುವುದು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ನಮ್ಮಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಆದರೆ ಅವುಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತವೆ. ಇದಕ್ಕೆ ಆನೆಕಂದಕಗಳು ಸಾಕ್ಷಿಯಾಗಿವೆ. ಹಿಂದೆ ಅರಣ್ಯದ ಸುತ್ತ ತೆಗೆದಿದ್ದ ಆನೆ ಕಂದಕಗಳು ಇದೀಗ ಮುಚ್ಚಿ ಹೋಗಿವೆ. ಹೀಗಾಗಿ ಕಾಡಾನೆಗಳು ನೇರವಾಗಿ ಅರಣ್ಯದಿಂದ ಜಮೀನಿಗೆ ಬರುತ್ತಿವೆ. ಈ ಬಾರಿ ಸುರಿದ ಭಾರೀ ಮಳೆಯಿಂದ ಮಣ್ಣು ಕುಸಿದು ಬಿದ್ದು ಕಂದಕಗಳು ಅಲ್ಲಲ್ಲಿ ಮುಚ್ಚಿ ಹೋಗಿವೆ. ಅದನ್ನು ಬಳಸಿಕೊಂಡು ನಿರಾತಂಕವಾಗಿ ಆನೆಗಳು ಸೇರಿದಂತೆ ಇತರೆ ವನ್ಯ ಪ್ರಾಣಿಗಳು ನಾಡಿಗೆ ಬರುತ್ತಿವೆ. ಜನರ ಮೇಲೂ ದಾಳಿ ಮಾಡುತ್ತಿವೆ.
ಬಂಡೀಪುರದಲ್ಲಿ ರೈಲ್ವೆ ಕಂಬಿ ಹತ್ತಲು ಕಾಡಾನೆ ಸರ್ಕಸ್!
ಪ್ರತಿನಿತ್ಯ ಈ ಭಾಗದ ಜಮೀನುಗಳಿಗೆ ಕಾಡಾನೆಗಳು ಲಗ್ಗೆಯಿಟ್ಟು ಬೆಳೆಯನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆಯು ಮುಚ್ಚಿರುವ ಕಂದಕದ ಮಣ್ಣನ್ನು ತೆಗೆದು ದುರಸ್ತಿ ಮಾಡಲು ಮೀನಮೇಷ ಎಣಿಸುತ್ತಿದೆ ಎಂಬುದು ರೈತರ ಆರೋಪ.