ಅರಣ್ಯ ಇಲಾಖೆಗೆ ತಲೆನೋವಾದ ಕಾಡಾನೆಗಳ ತಡೆಗೆ ಸೋಲಾರ್ ತಂತಿ ಅಳವಡಿಕೆ
ಮೈಸೂರು, ಮೇ 19: ಇತ್ತೀಚಿನ ದಿನಗಳಲ್ಲಿ ವ್ಯಾಪಕ ಅರಣ್ಯ ನಾಶದಿಂದ ಮಾನವ -ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಒಂದಲ್ಲ ಒಂದು ಕಡೆ ಕಾಡಾನೆಗಳಿಂದ ಬೆಳೆ ನಾಶ, ಚಿರತೆಯಿಂದ ಹಸು, ಮನುಷ್ಯರ ಮೇಲೆ ದಾಳಿ, ಊರಿಗೆ ಬಂದ ಹುಲಿ... ಇಂತಹ ಸುದ್ದಿಗಳು ಇದ್ದೇ ಇರುತ್ತವೆ. ಅದರಲ್ಲೂ ಕಾಡಾನೆಗಳಿಂದ ಗ್ರಾಮೀಣ ಭಾಗದ ಜನರು ಭಾರೀ ತೊಂದರೆ ಎದುರಿಸುತ್ತಿದ್ದಾರೆ.
Recommended Video
ಒಂದೇ ರಾತ್ರಿಯಲ್ಲಿ ಊರಿನೊಳಗೆ ನುಗ್ಗುವ ಕಾಡಾನೆಗಳ ಹಿಂಡು ಲಕ್ಷಾಂತರ ರೂಪಾಯಿಗಳ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯೂ ಕಾಡಿನಿಂದ ಆನೆಗಳು ಹೊರ ಬಾರದಂತೆ ಆಳವಾದ ಕಂದಕ ತೋಡಿ, ರೈಲ್ವೇ ಹಳಿಗಳ ಬೇಲಿ, ಸೋಲಾರ್ ಬೇಲಿ ಹೀಗೆ ವಿವಿಧ ಉಪಾಯಗಳನ್ನು ಮಾಡಿದೆ. ಆದರೆ ಏನೇ ಆದರೂ ಕಾಡಾನೆಗಳು ಒಂದಿಲ್ಲೊಂದು ಮಾರ್ಗದಿಂದ ಊರಿನೊಳಗೆ ಪ್ರವೇಶಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳ ನಿರ್ಭೀತಿಯ ಓಡಾಟ
ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ನುಗು ಕಿರು ಜಲಾಶಯ ಹಿನ್ನೀರಿನ ಪ್ರದೇಶವಿದೆ. ಈ ಹಿನ್ನೀರೇ ಸುತ್ತಮುತ್ತಲಿನ ಕಾಡು ಪ್ರಾಣಿಗಳಿಗೆ ಏಕೈಕ ನೀರಿನ ಆಸರೆ. ನೀರು ಕುಡಿಯಲು ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ಇಲ್ಲಿಗೆ ಬರುತ್ತವೆ. ಈ ಪ್ರದೇಶಕ್ಕೆ ತಾಗಿಕೊಂಡೇ ಬೀರುವಾಳು, ಹೆಡಿಯಾಲ, ಮೂಡಲಹುಂಡಿ, ಸಿದ್ದಯ್ಯನಹುಂಡಿ, ಹೊಸಬೀರುವಾಳು ಸೇರಿ ಹತ್ತಾರು ಗ್ರಾಮಗಳಿವೆ.
ಇಲ್ಲಿ ನೀರು ಕುಡಿದ ಬಳಿಕ ಹಿನ್ನೀರಿನ ಪ್ರದೇಶದಿಂದ ಕಾಡಿಗೆ ಮರಳದೇ ಕೆಲವು ಆನೆಗಳು ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದವು. ಇವುಗಳ ಉಪಟಳ ಜಾಸ್ತಿ ಆಗುತಿದ್ದಂತೆ ಅದನ್ನು ತಡೆಯಲು ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ರೈಲ್ವೇ ಹಳಿಗಳ ಕಂಬಿ ಬೇಲಿ ನಿರ್ಮಿಸಿತು. ಆದರೂ, ಆನೆಗಳು ಬೇಲಿ ಕಿತ್ತು ಹಾಕಿ ಗ್ರಾಮಗಳತ್ತ ಲಗ್ಗೆಯಿಟ್ಟು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರಿಂದ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಕಾಡಾನೆಗಳು ದಾಟದಂತೆ ಎಂಟು ಅಡಿ ಆಳದ ಕಂದಕವನ್ನು ತೋಡಿಸಲಾಯಿತು. ಆದರೂ ಕಂದಕದೊಳಗೆ ಮಣ್ಣು ಹಾಕಿ ಅದನ್ನೂ ದಾಟಿಕೊಂಡು ಆನೆಗಳು ಊರಿನೊಳಗೆ ನುಗ್ಗಿವೆ.
ಬೆಳ್ಳಂಬೆಳಿಗ್ಗೆ ಸಾಸಲಪುರ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿಸಲಗ
ಹೇಗಾದರೂ ಮಾಡಿ ಅವುಗಳ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಟ್ರಂಚ್ ಪಕ್ಕದಲ್ಲೇ ಅರಣ್ಯ ಇಲಾಖೆ ಇದೀಗ ಸೋಲಾರ್ ತಂತಿ ಅಳವಡಿಸಿದೆ. ಇದು ಕೊಂಚ ನೆಮ್ಮದಿ ತರಿಸಿದರೂ, ಸೋಲಾರ್ ತಂತಿಯನ್ನೂ ಕಿತ್ತು ಹಾಕಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು. ಮುಂದೇನಾಗುವುದೋ ಕಾದು ನೋಡಬೇಕಿದೆ...