ಅಂಬಾರಿ ಹೊತ್ತ ಅರ್ಜುನನ ಮಾವುತ ವಿನು ಸಂದರ್ಶನ
ಮೈಸೂರು, ಅಕ್ಟೋಬರ್ 2 : "ಈ ಅವಕಾಶ ಸಿಗುತ್ತದೆಂದು ನಾನೆಂದೂ ಭಾವಿಸಿರಲಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ನಿಭಾಯಿಸಿದ ಹೆಮ್ಮೆಯಿದೆ. ಯಾವುದೇ ಆತಂಕ ಇರಲಿಲ್ಲ. ಯಶಸ್ವಿಯಾಗಿ ಮುನ್ನಡೆಸುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು" -ಹೀಗೆ ಮಾತನಾಡಿದ ಮಾವುತ ವಿನೂವಿನ ಕಣ್ಣಲ್ಲಿ ಸಾಧನೆ ಮಾಡಿದ ಸಾರ್ಥಕ್ಯವಿತ್ತು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಆನೆ ಅರ್ಜುನನನ್ನು ಮೊದಲ ಬಾರಿಗೆ ಮುನ್ನಡೆಸಿದ ಮಾವುತ ವಿನೂ ಒನ್ಇಂಡಿಯಾದೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ. ಅರ್ಜುನನಿಗೆ ಬೆಳಗಿನ ತಿಂಡಿ ನೀಡುತ್ತಾ ವಿರಾಮದ ಮೂಡ್ ನಲ್ಲಿ ಕುಳಿತಿದ್ದ ವಿನೂ, ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.
ಅಕ್ಟೋಬರ್ 8 ರವರೆಗೂ ಝಗಮಗಿಸಲಿದೆ ಮೈಸೂರಿನ ರಸ್ತೆಗಳು
ಸತತ ತಾಲೀಮು ಹಾಗೂ ಕಳೆದೊಂದು ವರ್ಷದಿಂದ ಅರ್ಜುನ ಹೊಂದಿಕೊಂಡಿದ್ದರಿಂದ ಅಂಬಾರಿ ಮೆರವಣಿಗೆ ವಿಚಾರದಲ್ಲಿ ಯಾವುದೇ ಆತಂಕ ಇರಲಿಲ್ಲ. ಆದರೂ ಜನರ ಮಧ್ಯೆ ಬಂದಾಗ ಏನಾಗುತ್ತದೋ ಎಂಬ ಸಣ್ಣ ಅಳುಕು ಇತ್ತು. ನಂತರ ಅದೂ ನಿವಾರಣೆಯಾಯಿತು. ಅರ್ಜುನ ನನ್ನ ಮನೆದೇವರು, ಆತ ಮೃದು ಸ್ವಭಾವದವನು. ಅರ್ಜುನ ಕಾಡಿನಲ್ಲಿ ರಾಜನ ರೀತಿ ಇರುತ್ತಾನೆ ಎನ್ನುತ್ತಾರೆ ಅವರು.
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆ ಆವರಣ ಪ್ರವೇಶ ಮಾಡಿದ ಬಳಿಕ ಅರ್ಜುನ ಗಾಂಭೀರ್ಯ ತೋರುತ್ತಾನೆ ಎಂದು ಮುಗುಳ್ನಕ್ಕರು ವಿನು.
ಅರ್ಜುನನ ಮೇಲೆ ಚಾಮುಂಡಿ ಆಶೀರ್ವಾದ
ಕಳೆದ ವರ್ಷದ ದಸರಾದಲ್ಲಿ ಅಂಬಾರಿ ಆನೆ ಮುನ್ನಡೆಸುವ ವಿಚಾರದಲ್ಲಿ ನನಗೇ ಆತ್ಮವಿಶ್ವಾಸ ಇರಲಿಲ್ಲ. ಹಾಗಾಗಿ ಅಧಿಕಾರಿಗಳನ್ನು ನಾನೇ ಕೇಳಿರಲಿಲ್ಲ. ಈ ಬಾರಿ ಭಯ ನಿವಾರಣೆ ಆಗಿತ್ತು. ಮುಂದಿನ ವರ್ಷವೂ ನಾನೇ ಮುನ್ನಡೆಸುತ್ತೇನೆ ಎಂದರು. ಅರ್ಜುನ ಹೊಟ್ಟೆ ಹಸಿದಾಗ ಸಂಕೇತ ತೋರುತ್ತಾನೆ, ಬೇಸರ ಆದರೆ ಮುಖ ಸಿಂಡರಿಸಿಕೊಳ್ಳುತ್ತಾನೆ. ನಾನು ಬಾಲ್ಯದಿಂದಲೂ ಅರ್ಜುನನನ್ನು ಬಲ್ಲೆ.
ಅದರಿಂದ ಆತನ ಸ್ವಭಾವವನ್ನು, ಪ್ರತಿ ಸಣ್ಣ ನಡೆಯನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಅರ್ಜುನನ ಮೇಲಿದೆ. ಇದರಿಂದಲೇ ಅರ್ಜುನ ಯಾವುದೇ ಆತಂಕ ಇಲ್ಲದೇ ಬಲು ಭಾರದ ಚಿನ್ನದ ಅಂಬಾರಿ ಹೊತ್ತು ಸರಾಗವಾಗಿ ಸಾಗಿದ ಎಂದರು ವಿನು.
ಸಣ್ಣಪ್ಪನಲ್ಲಿ ಬೇಸರ
ಈ ಹಿಂದೆ ದೊಡ್ಡ ಮಾಸ್ತಿ ಅವರು ಅರ್ಜುನನ ಮಾವುತರಾಗಿದ್ದರು. ಅವರ ಮಗ ಸಣ್ಣಪ್ಪ ಅಲಿಯಾಸ್ ಮಹೇಶ್ ಆನೆ ಅರ್ಜುನನ ಕಾವಾಡಿಯಾಗಿದ್ದಾರೆ. ಮಾಸ್ತಿ ನಿಧನರಾಗಿದ್ದರಿಂದ ಕಳೆದ ದಸರಾದಲ್ಲಿ ಅಂಬಾರಿ ಆನೆ ಮುನ್ನಡೆಸುವ ಅವಕಾಶ ಸಣ್ಣಪ್ಪ ಅವರಿಗೆ ಸಿಕ್ಕಿತ್ತು. ಅವರು ಅರ್ಜುನನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ಈ ಬಾರಿ ಆ ಅವಕಾಶ ವಿನೂ ಪಾಲಾಗಿದ್ದರಿಂದ ಸಣ್ಣಪ್ಪ ಮುಖದಲ್ಲಿ ಬೇಸರ ಮನೆ ಮಾಡಿತ್ತು.
ಅರ್ಜುನನನ್ನು ಕಟ್ಟಿ ಹಾಕಿದ್ದ ಸ್ಥಳದತ್ತಲೂ ಅವರು ಮುಖ ಮಾಡಿರಲಿಲ್ಲ. ವಿನೂ ಒಬ್ಬರೇ ಅರ್ಜುನನ ಆರೈಕೆಯಲ್ಲಿ ನಿರತರಾಗಿದ್ದರು.
ಮೂರು ವರುಷ ದಸರೆಗೆ ಕಾಲಿಡಲ್ಲ
ಮುಂದಿನ 3 ವರ್ಷ ದಸರಾ ಮಹೋತ್ಸವದಿಂದ ದೂರ ಉಳಿದು, ನಂತರ ಹೊಸ ಆನೆಯೊಂದಿಗೆ ಬರುತ್ತೇನೆ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಆಕ್ರೋಶದಿಂದಲೇ ಹೇಳುತ್ತಾನೆ ಅಂಬಾರಿ ಆನೆ ಅರ್ಜುನನ ಕಾವಾಡಿ ಮಹೇಶ್ ಅಲಿಯಾಸ್ ಸಣ್ಣಪ್ಪ. ಶನಿವಾರ ನಡೆದ ಜಂಬೂಸವಾರಿಯಲ್ಲಿ ಅರ್ಜುನ ಆನೆಯನ್ನು ಮುನ್ನಡೆಸುವ ಅವಕಾಶ ನೀಡದೇ ಇರಲು ರಾಜಕೀಯ ಕಾರಣ. ಯಾರ್ಯಾರದೋ ಚಿತಾವಣೆ ನಡೆದಿದೆ ಎನ್ನುತ್ತಾರೆ.
ಮೂರು ವರ್ಷದಲ್ಲಿ ಮತ್ತೊಂದು ಆನೆ ತಯಾರು ಮಾಡ್ತೀನಿ
ತಂದೆ ಮರಣಾ ನಂತರ, ಕಳೆದ ದಸರಾದಲ್ಲಿ ಅರ್ಜುನನನ್ನು ನಾನೇ ನಿರ್ವಹಿಸಿದ್ದೆ. ಈಗಲೂ ದೊಡ್ಡಮಾಸ್ತಿ ಅವರ ಹೆಸರು ಉಳಿಸುವ ಸಲುವಾಗಿ ಬಳ್ಳೆ ಆನೆ ಶಿಬಿರದಲ್ಲಿರುವ ಆನೆಗಳ ಪೈಕಿ ಯಾವುದಾದರೊಂದು ಅಥವಾ ಮುಂದೆ ನಡೆಯಲಿರುವ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕುವ ಆನೆಯನ್ನು ಪಳಗಿಸಿ, ಅರ್ಜುನನಷ್ಟೇ ಚೆನ್ನಾಗಿ ತಯಾರು ಮಾಡುತ್ತೇನೆ.
ಅದಕ್ಕೆ ಮೂರು ವರ್ಷ ಕಾಲಾವಕಾಶ ಅಗತ್ಯ. ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಹೊಸ ಆನೆಗೆ ಅರ್ಜುನ-2 ಎಂದೇ ನಾಮಕರಣ ಮಾಡಬೇಕೆಂದು ಯೋಚಿಸಿದ್ದೇನೆ ಎಂದು ಮಹೇಶ ಧುಮುಗುಡುತ್ತಲೇ ಹೇಳಿದರು.