ಎಚ್.ಡಿ ಕೋಟೆ ಬಳಿ ಅನುಮಾನಾಸ್ಪದವಾಗಿ ಆನೆ, ಚಿರತೆ ಸಾವು
ಮೈಸೂರು, ಜುಲೈ 9: ಎಚ್.ಡಿ. ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಡಿಬಿ ಕುಪ್ಪೆ ವಲಯದಲ್ಲಿ ಆನೆ ಮತ್ತು ಚಿರತೆ ಪ್ರತ್ಯೇಕ ಪ್ರದೇಶದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಗಡಿ ಭಾಗದ ಕಾಡಂಚಿನ ಆನೆಮಾಳ ಗ್ರಾಮದ ಬಳಿ ಸುಬ್ರಹ್ಮಣ್ಯ ಎಂಬುವರ ಜಮೀನಿನ ಬಾಳೆ ತೋಟಕ್ಕೆ ಕಾಡಿನಿಂದ ಬಂದಿದ್ದ ಭಾರಿ ಗಾತ್ರದ 35 ವರ್ಷದ ಹೆಣ್ಣಾನೆ, ಅಕ್ರಮವಾಗಿ ಸಂಪರ್ಕಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದ ಮಾಲೀಕ ಸುಬ್ರಹ್ಮಣ್ಯ ಪರಾರಿಯಾಗಿದ್ದಾನೆ.
ಕೊಡಗಿನಲ್ಲಿ ಕಾಡಾನೆ ದಾಳಿ; ವಿದ್ಯಾರ್ಥಿ, ಇಬ್ಬರು ಮಹಿಳೆಯರಿಗೆ ಗಾಯ
ಜೊತೆಗೆ ಡಿಬಿ ಕುಪ್ಪೆ ಅರಣ್ಯ ಪ್ರಾರಂಭದ ಉದ್ದೂರು ಹಾಡಿ ಗೇಟ್ ಸಮೀಪ ಮೂರು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿದೆ. ಚಿರತೆ ಬೇರೆ ಪ್ರಾಣಿ ಜೊತೆ ಕಾದಾಡಿ ಸಾವನ್ನಪ್ಪಿದೆಯೇ ಅಥವಾ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದೆಯೇ ಎಂಬುದರ ಬಗ್ಗೆ ಅನುಮಾನ ಉಂಟಾಗಿದೆ. ಆನೆ ಮತ್ತು ಚಿರತೆ ಸಾವಿನ ಸಂಬಂಧ ಸಿಸಿಎಫ್ ನಾರಾಯಣಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
2018ರ ಮೇ ತಿಂಗಳಿನಿಂದ 2019ರ ಮಾರ್ಚ್ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 11 ಆನೆಗಳು ನಾನಾ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಚಾಮರಾಜನಗರ, ಮಡಿಕೇರಿ ಭಾಗದಲ್ಲಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಿ ಕಾಲಕಳೆಯುತ್ತಿದ್ದಾರೆ.