ವಿರಾಜಪೇಟೆಯಲ್ಲಿ ವಿದ್ಯುತ್ ಸ್ಪರ್ಶಕ್ಕೆ ತಾಯಿ-ಮಗಳು ಬಲಿ
ಮಡಿಕೇರಿ, ಮಾರ್ಚ್ 05: ಕೂಲಿ ಕೆಲಸಕ್ಕೆಂದು ದೂರದ ಅಸ್ಸಾಂನಿಂದ ಕೊಡಗಿಗೆ ಬಂದಿದ್ದ ತಾಯಿ ಮತ್ತು ಮಗಳು ಕಾಳು ಮೆಣಸು ಕೊಯ್ಯುವಾಗ ವಿದ್ಯತ್ ಸ್ಪರ್ಶವಾಗಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯರನ್ನು 45 ವಷ೯ದ ಸ್ವರೂಪ ಖಾತುನ್ ಮತ್ತು 20 ವಷ೯ದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಕಾಳು ಮೆಣಸು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೇ ಈ ದುರಂತಕ್ಕೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
"ಕರಿಮೆಣಸು ಕುಯ್ಯುವಾಗ ಅಲ್ಯೂಮಿನಿಯಂ ಏಣಿಯನ್ನು ಬಳಕೆ ಮಾಡಬೇಡಿ' ಎಂದು ಕಾರ್ಮಿಕ ಇಲಾಖೆಯು ಆದೇಶ ಹೊರಡಿಸಿದೆ.
ಆದಾಗ್ಯೂ ಕೂಡ ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ ಎನ್ನುವುದಕ್ಕೆ ಇಂದು ನಡೆದ ದುರಂತ ಪ್ರಕರಣ ಸಾಕ್ಷಿಯಾಗಿದೆ. ಹೊಟ್ಟೆಪಾಡಿಗಾಗಿ ಕೂಲಿಯನ್ನು ಅರಸಿಕೊಂಡು ಬಂದ ಎರಡು ಅಮಾಯಕ ಜೀವಗಳು ಅಲ್ಯೂಮಿನಿಯಂ ಏಣಿಯಿಂದಾಗಿ ಬಲಿಯಾಗಿವೆ.
ಹಣ ಡಬಲ್ ಮಾಡ್ತೀವಿ ಎಂದು ಟೋಪಿ ಹಾಕಿದ ಕುಶಾಲನಗರದ ಮೂವರ ಬಂಧನ
ಕಾಳು ಮೆಣಸು ಕೊಯ್ಯಲೆಂದು ಖಾತುನ್ ಮತ್ತು ಅವರ ಮಗಳು ಹಸೀನಾ ಅಲ್ಯೂಮಿನಿಯಂ ಏಣಿ ಮೇಲೆ ಹತ್ತಿದ್ದಾರೆ. ಈ ವೇಳೆ ತೋಟದ ಮೇಲೆ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿಯಿಂದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಇವರಿಬ್ಬರಿಗೂ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ವಿದ್ಯುತ್ ಸ್ಪರ್ಶದ ತೀವ್ರತೆಗೆ ಇಬ್ಬರು ಮಹಿಳೆಯರ ಕಾಲು ಸುಟ್ಟು ಕರಕಲಾಗಿದೆ. ಮೃತದೇಹಗಳನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.