ವೃದ್ಧನ ರುಂಡ ಕತ್ತರಿಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಮೈಸೂರು, ಸೆಪ್ಟೆಂಬರ್ 22: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ ವೃದ್ಧರೊಬ್ಬರ ತಲೆ ಕತ್ತರಿಸಿ, ಭೀಕರವಾಗಿ ಕೊಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ. ಬನ್ನೂರು ಪಟ್ಟಣದ ಸಂಪದ ಚಾಮನಹಳ್ಳಿ ಗ್ರಾಮದ ಕೆಂಪೇಗೌಡ (65) ಅವರನ್ನು ಶನಿವಾರ ರಾತ್ರಿ ರುಂಡ ಕತ್ತರಿಸಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
ಇದೇ ಗ್ರಾಮದ ಚೇತನ್ (28) ಮತ್ತು ಈತನ ಸ್ನೇಹಿತ ಬನ್ನೂರಿನ ತ್ಯಾಗರಾಜ ಮೊಹಲ್ಲಾದ ಮಧು (22) ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ 16 ವರ್ಷದ ಯುವತಿಯ ಕತ್ತು ಕೊಯ್ದು ಹತ್ಯೆ
ಕೊಲೆಯಾಗಿರುವ ಕೆಂಪೇಗೌಡ ಅವರು ಆರೋಪಿ ಚೇತನ್ಗೆ ದೂರದ ಸಂಬಂಧಿ. ಚೇತನ್ ನ ತಾಯಿಗೆ ಸೇರಿದ ಖಾಲಿ ಜಾಗವನ್ನು ಕೆಂಪೇಗೌಡ ಅತಿಕ್ರಮಿಸಿಕೊಂಡು, ಮನೆ ನಿರ್ಮಿಸಿಕೊಂಡಿದ್ದರು ಎಂಬ ವಿಚಾರವಾಗಿ ಗ್ರಾಮದಲ್ಲಿ ಹಲವಾರು ಬಾರಿ ನ್ಯಾಯ ಪಂಚಾಯಿತಿ ನಡೆದಿತ್ತು.
ಆದರೆ, ಇಬ್ಬರೂ ಒಪ್ಪದೇ ನ್ಯಾಯಾಲಯದಲ್ಲಿ 2 ವರ್ಷಗಳ ಹಿಂದೆ ದಾವೆ ಹೂಡಿದ್ದರು. ಜಾಗದ ವಿಚಾರವಾಗಿ ಶುಕ್ರವಾರ ಚೇತನ್ ನ್ಯಾಯಾಲಯದಿಂದ ಕೆಂಪೇಗೌಡರಿಗೆ ಸಮನ್ಸ್ ಕಳುಹಿಸಿದ್ದರು. ಈ ವಿಚಾರವಾಗಿ ಕೆಂಪೇಗೌಡ ರಾತ್ರಿ ಕುಡಿದು ಬಂದು ಮನೆಯ ಹತ್ತಿರ ಚೇತನ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ.
ಈ ಘಟನೆಯಿಂದ ಕೋಪಗೊಂಡ ಚೇತನ್ ತನ್ನ ಸ್ನೇಹಿತ ಮಧು ಜತೆ ಸೇರಿ, ಕುಡಿದ ಅಮಲಿನಲ್ಲಿ ಕುರಿ ಕಟ್ಟುವ ಕೊಟ್ಟಿಗೆಯಲ್ಲಿ ಮಲಗಿದ್ದ ಕೆಂಪೇಗೌಡರ ಮೇಲೆ ಮಧ್ಯರಾತ್ರಿ 1.30ರ ಸಮಯದಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿ, ಬಳಿಕ ತಲೆ ಕತ್ತರಿಸಿದ್ದಾರೆ. ನಂತರ ರುಂಡವನ್ನು ತೆಗೆದುಕೊಂಡು ಆರೋಪಿಗಳು ಚಾಮನಹಳ್ಳಿಯಿಂದ ಬನ್ನೂರು ಸಂತೆಮಾಳದ ಕಡೆ ಹೋಗುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಇವರನ್ನು ತಡೆದು ವಿಚಾರಿಸಿದ್ದಾರೆ.
ಆಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಮತ್ತಷ್ಟು ಪೊಲೀಸರು ಆರೋಪಿಗಳನ್ನು ಸಂತೆಮಾಳದ ಆತಿಥಿಗೃಹದ ಮುಂಭಾಗ ವಶಕ್ಕೆ ಪಡೆದು, ಬಂಧಿಸಿದರು ಎಂದು ತಿಳಿದುಬಂದಿದೆ.
ಆ ಬಳಿಕ ವಿಚಾರಣೆಗೆ ಒಳಪಡಿಸಿ ಆರೋಪಿಗಳನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಯಿತು. ಕೊಲೆಯಾದ ಕೆಂಪೇಗೌಡರ ತಲೆ ಹಾಗೂ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.