SSLC ಪರೀಕ್ಷೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುವುದೇನು?
ಮೈಸೂರು, ಮೇ 29: ಕರ್ನಾಟಕ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 27 ಕ್ಕೆ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ನ ಭೀತಿಯಿಂದಾಗಿ ಜೂನ್ 25 ಕ್ಕೆ ಮುಂದೂಡಲಾಯಿತು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಈ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಈಗಾಗಲೇ ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಚರ್ಚೆ, ಸಮಾಲೋಚನೆ, ಫೋನ್ಇನ್ ಕಾರ್ಯಕ್ರಮಗಳಾಗಿವೆ ಎಂದರು.
Recommended Video
ಜೂನ್ 25 ರಿಂದ ಜುಲೈ 4 ರವರೆಗೆ ಪರೀಕ್ಷಾ ವೇಳಾಪಟ್ಟಿ ನಿಗದಿಯಾಗಿದ್ದು, 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ ಹಾಗೂ ವಿದ್ಯಾರ್ಥಿಗಳಿಗೆ ಹೊಸ ವಾತಾವರಣದಲ್ಲಿ ಪರೀಕ್ಷೆ ನಡೆಸಬೇಕಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಇರುತ್ತದೆ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಗಳನ್ನು ಕೊಡಲು ಸ್ಕೌಟ್ಸ್ ಮತ್ತು ಗೈಡ್ಸ್ ಮುಂದೆ ಬಂದಿದೆ. ಮೈಸೂರು ಜಿಲ್ಲೆಗೆ 42 ಸಾವಿರ ಮಾಸ್ಕ್ ಕೊಟ್ಟಿದ್ದಾರೆ. ಪ್ರತಿ ಮಕ್ಕಳಿಗೆ 2 ಮಾಸ್ಕ್ ಸಿಗುತ್ತದೆ ಮತ್ತು 4000 ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಇರುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದರು. ಮೈಸೂರು ಜಿಲ್ಲೆಯಲ್ಲಿ 130 ಪರೀಕ್ಷಾ ಕೇಂದ್ರಗಳಿದ್ದು, ಮಂಡ್ಯದಲ್ಲಿ 83, ಕೊಡಗಿನಲ್ಲಿ 27 ಪರೀಕ್ಷಾ ಕೇಂದ್ರಗಳಿವೆ. ಮೂರು ಜಿಲ್ಲೆಗಳಿಂದ 248 ಪರೀಕ್ಷಾ ಕೇಂದ್ರಗಳಿವೆ. ಕಂಟೈನ್ಮೆಂಟ್ ವಲಯದಲ್ಲಿ ಯಾವುದೂ ಇಲ್ಲವೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಚ್ ಗಳ ನಡುವೆ ಅಂತರ ಇರುತ್ತದೆ
ಥರ್ಮಲ್ ಸ್ಕ್ಯಾನರ್ ಮಾಡಲು ಆರೋಗ್ಯ ಇಲಾಖೆಯಿಂದ ತಂಡಗಳನ್ನು ನಿಯೋಜಿಸಲಾಗುವುದು. ಅಲ್ಲದೆ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ನಿಯೋಜಿಸುತ್ತೇವೆ. ಈ ಹಿಂದೆ ಪರೀಕ್ಷೆ ವೇಳೆ ಪ್ರತಿ ಹಾಲ್ನಲ್ಲಿ 24 ಜನ ಕೂರಿಸುತ್ತಿದ್ದೆವು. ಈ ವರ್ಷ 18 ವಿದ್ಯಾರ್ಥಿಗಳನ್ನು ಕೂರಿಸುತ್ತೇವೆ, ಬೆಂಚ್ ಗಳ ನಡುವೆ ಅಂತರ ಇರುತ್ತದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕರ ಮಕ್ಕಳಿಗೂ ಅವಕಾಶ
ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರುಗಳಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ. ಪರೀಕ್ಷೆಯನ್ನು ತಪ್ಪಿಸಿಕೊಂಡರೆ, ಮತ್ತೆ ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಕ್ಯಾಂಡಿಡೇಟ್ ಅಂತ ಪರಿಗಣಿಸುತ್ತೇವೆ. ವಲಸೆ ಕಾರ್ಮಿಕರ ಮಕ್ಕಳಿಗೆ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
SSLC, PUC ಪರೀಕ್ಷೆ: ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು?
ಪರೀಕ್ಷೆ ನಡೆಸಲೇಬಾರದು ಎಂಬ ಅಭಿಪ್ರಾಯವಿದೆ
ಸುರಕ್ಷತೆ ಮತ್ತು ಆತ್ಮವಿಶ್ವಾಸ ನಮ್ಮ ಧ್ಯೇಯವಾಗಿದೆ. ಅದಕ್ಕಾಗಿ ಮನೆ ಮನೆಗಳಿಗೆ ತಲುಪುವ ಕೆಲಸ ಮಾಡುತ್ತಿದ್ದೇವೆ. ಕಲಿಕಾ ನಿರಂತರತೆ ಕಾಪಾಡಿಕೊಂಡಿದ್ದೇವೆ. ಈ ಕಾರಣಕ್ಕಾಗಿ ಪರೀಕ್ಷೆ ಯಶಸ್ವಿಯಾಗುತ್ತದೆ ಎಂದು ಶಿಕ್ಷಣ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಪರೀಕ್ಷೆ ನಡೆಸಲೇಬಾರದು ಎಂಬ ಅಭಿಪ್ರಾಯವಿದೆ. ಈ ಸಂಬಂಧ ಹೈಕೋರ್ಟ್ನಲ್ಲೂ ಪಿಐಎಲ್ ದಾಖಲಾಗಿತ್ತು. ಎಸ್.ಎಸ್.ಎಲ್.ಸಿ ಜೀವನದ ಪ್ರಮುಖ ಘಟ್ಟ, ಆದ್ದರಿಂದ ಪರೀಕ್ಷೆ ನಡೆಸಲೇಬೇಕಿದೆ ಎಂದು ಸುರೇಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.