ಕೊರೊನಾ ಭೀತಿ ನಡುವೆ ಮೈಸೂರು, ಕೊಡಗಿನಲ್ಲಿ ಭೂಕಂಪನದ ಅನುಭವ
ಮೈಸೂರು, ಏಪ್ರಿಲ್ 03: ಕೊರೊನಾ ವೈರಸ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವುದರಿಂದಾಗಿ ಜನರು ಆತಂಕದಲ್ಲಿದ್ದಾರೆ. ಈ ನಡುವೆ ಇಂದು ಮೈಸೂರಿನಲ್ಲಿ ಭೂಕಂಪನ ಆದ ಅನುಭವ ಆಗಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರದ ಕೆಲವು ಗ್ರಾಮಗಳಲ್ಲಿ ಭೂಮಿ ಭೂಕಂಪನದ ಅನುಭವವಾಗಿದ್ದು, ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆ.ಆರ್.ನಗರದ ಭೇರ್ಯ ಗ್ರಾಮದ ಸುತ್ತಮುತ್ತ 5:20ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ. ಮುಂಜನಹಳ್ಳಿ ಗ್ರಾಮದಲ್ಲಿ ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ನೆಲಕ್ಕೆ ಬಿದ್ದಿದ್ದು, ತಕ್ಷಣವೇ ಮನೆಯಲ್ಲಿದ್ದ ಎಲ್ಲರೂ ಆಚೆ ಓಡಿ ಬಂದಿದ್ದಾರೆ.
ಭೇರ್ಯ, ಚುಂಚನಕಟ್ಟೆ ಹೋಬಳಿ ಸೇರಿದಂತೆ ಅನೇಕ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
"ಇದೇ ಮೊದಲ ಬಾರಿಗೆ ಭೂಮಿ ಕಂಪಿಸಿದ ಅನುಭವವಾಯಿತು. ಸಂಜೆ 5.20ರ ಸಮಯದಲ್ಲಿ ಎಲ್ಲರೂ ಟಿ.ವಿ ನೋಡುತ್ತಿದ್ದೆವು. ತಕ್ಷಣವೇ ಭಾರಿ ಶಬ್ದ ಕೇಳಿಸಿತು. ನಾವೆಲ್ಲ ಆಚೆ ಓಡಿ ಬಂದೆವು. ಎರಡು ಮೂರು ಸೆಕೆಂಡ್ ಭೂಮಿ ಅಲುಗಾಡಿದ ಅನುಭವಾಯಿತು" ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಕೊರೊನಾ ಭೀತಿ ನಡುವೆ ಸಾವಿನ ಸುನಾಮಿ ಭೀತಿ ಎಚ್ಚರಿಕೆ!
ಸಾಲಿಗ್ರಾಮ, ಅಂಕನಕಟ್ಟೆ, ಚುಂಚನಕಟ್ಟೆ, ತಂದ್ರೆ, ಕಾಟ್ನಾಳು, ಕರ್ಪೂರವೆಳ್ಳಿ ಸುತ್ತಮುತ್ತಲೂ ಭೂಮಿ ನಡುಗಿದ ಅನುಭವವಾಗಿದೆ.
ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ: ಮೈಸೂರಲ್ಲದೆ ಕೊಡಗಿನ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಮಿ ಕಂಪಿಸುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಹಾರಂಗಿ ಸಿಸ್ಮೋಗ್ರಾಫ್ ನಲ್ಲಿ 2.6 ತೀವ್ರತೆ ದಾಖಲಾಗಿರುವುದಾಗಿ ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.