ದಸರಾ ಕುಸ್ತಿ ಪಂದ್ಯಾವಳಿ ವೇಳೆ ಗಲಾಟೆ: ಮುಂದೆ ಏನಾಯ್ತು...?
ಮೈಸೂರು, ಅಕ್ಟೋಬರ್. 16: ರಾಜ್ಯ ಮಟ್ಟದ ದಸರಾ ಕುಸ್ತಿ ಪಂದ್ಯಾವಳಿ ನಡೆಯುವ ವೇಳೆ ಸೋತವನ ಪರ ಕುಸ್ತಿ ಪ್ರಿಯರು ಗಲಾಟೆ ಎಬ್ಬಿಸಿದ್ದರಿಂದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆಯಿತು.
ದಸರಾ-2018ರ ಕುಸ್ತಿ ಪಂದ್ಯಾವಳಿಯ ಅಂತಿಮ ಕುಸ್ತಿ 'ದಸರಾ ಕಂಠೀರವ ಟೈಟಲ್ 'ಪ್ರಶಸ್ತಿಗೆ ನಡೆದ ಪಂದ್ಯದಲ್ಲಿ ನಿಯಮದ ಪ್ರಕಾರವೇ ಪೈ.ಸುನಿಲ್ ಪಡತೆರೆ ಅಧಿಕೃತ ವಿಜೇತರು.
ದಾವಣಗೆರೆಯ ಪೈ.ಕಿರಣ್ ಅವರು ಕುಸ್ತಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರಲ್ಲದೆ, ಅವರನ್ನೇ ದಸರಾ ಕಂಠೀರವ ಎಂದು ಘೋಷಿಸಬೇಕೆಂದು ಜನರು ಒತ್ತಾಯ ಮಾಡಲು ಶುರು ಮಾಡಿದರು. ಆರಂಭದಲ್ಲಿ ಕೇವಲ ಒತ್ತಾಯವಾಗಿದ್ದ ಜನರ ಬೇಡಿಕೆ ತದನಂತರ ಆಕೋಶಕ್ಕೆ ತಿರುಗಿತು.
ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು?
ಒಬ್ಬ ಉತ್ತಮ ಕುಸ್ತಿಪಟುವಿಗೆ ಮೋಸ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತು. ಇದರಿಂದ ಕುಪಿತರಾದ ಕುಸ್ತಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದರು. ಕುಸ್ತಿಯನ್ನು ಪೈ.ಕಿರಣ್ ಗೆದ್ದಿದ್ದಾರೆ. ತೀರ್ಪುಗಾರರು ತಪ್ಪಾಗಿ ಫಲಿತಾಂಶ ನೀಡಿದ್ದಾರೆ ಎಂದು ರೊಚ್ಚಿಗೆದ್ದರು. ಮುಂದೆ ಏನಾಯ್ತು ಓದಿ...
ಬಾಟಲ್, ಕಲ್ಲುಗಳು ತೂರಿಬಂದವು
ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಕುಡಿಯುವ ನೀರಿನ ಬಾಟಲ್, ಕಲ್ಲುಗಳನ್ನು ತೂರಲು ಆರಂಭಿಸಿದರು. ಈ ವೇಳೆ ಮಟ್ಟಿಯ ಸಮೀಪದಲ್ಲಿದ್ದ ಹಿರಿಯ ಪೈಲ್ವಾನರು ಮತ್ತು ತೀರ್ಪುಗಾರರು ರಕ್ಷಣೆಗೆ ಕುರ್ಚಿಗಳ ಮೊರೆ ಹೋದರು.
ಸಮಾಧಾನದಿಂದ ವರ್ತಿಸಿ
ಈ ವೇಳೆ ದಸರಾ ಉಪ ವಿಶೇಷಾಧಿಕಾರಿಗಳಾದ ಅಪರ ಪೊಲೀಸ್ ಅಧೀಕ್ಷಕಿ ಸ್ನೇಹ ಅವರು ಕುಸ್ತಿ ಪ್ರಿಯರಲ್ಲಿ ಮನವಿ ಮಾಡಿಕೊಂಡರು. ಕುಸ್ತಿ ನಿಯಮದ ಪ್ರಕಾರವೇ ನಡೆದಿದೆ. ಇದರಲ್ಲಿ ಯಾವುದೇ ಮೋಸ ನಡೆದಿಲ್ಲ. ಸಮಾಧಾನದಿಂದ ವರ್ತಿಸುವಂತೆ ಕೋರಿದರು.
ಮೈಸೂರು ದಸರಾ: ಗ್ರಾಮೀಣ ಭಾಗದ ಜನರಿಗೆ ಕೆಎಸ್ ಆರ್ ಟಿಸಿಯಿಂದ ಬಂಪರ್ ಕೊಡುಗೆ
ಲಘುಲಾಠಿ ಪ್ರಹಾರ
ಇದಕ್ಕೆ ಜಗ್ಗದ ಕುಸ್ತಿ ಅಭಿಮಾನಿಗಳು ಮತ್ತಷ್ಟು ಕಲ್ಲುಗಳು, ಕುಡಿಯುವ ನೀರಿನ ಬಾಟಲ್ ಅನ್ನು ಎಸೆಯುತ್ತ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಪರ ಪೊಲೀಸ್ ಅಧೀಕ್ಷಕರಾದ ಸ್ನೇಹ ಅವರು ನಿರಾಸೆಗೊಂಡು ಮಟ್ಟಿಯಲ್ಲಿ ಮಲಗಿದ್ದ ಪೈ.ಕಿರಣ್ ಅವರನ್ನು ಹೊರ ಬರುವಂತೆ ಸೂಚಿಸಿದರು.
ಈ ವೇಳೆ ಜನರು ಕಿರಣ್ ಗೆ ಮಟ್ಟಿಯಿಂದ ಹೊರ ಹೋಗದಂತೆ ಜೋರು ದನಿಯಲ್ಲಿ ಕೂಗಲು ಆರಂಭಿಸಿದರು. ಸ್ಥಳಗಾಕ್ಕಮಿಸಿದ ರಿಸರ್ವ್ ಪೊಲೀಸರು ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಬಲಭಾಗದಲ್ಲಿದ್ದ ಜನರಿಗೆ ಲಘುಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ನಾಡಕುಸ್ತಿ ನಡೆಯಿತು.
ಗೆದ್ದವರಿಗೆ ನಗದು ಬಹುಮಾನ
ದಸರಾ ಕಂಠೀರವ ವಿಜೇತರು ಒಂದು ಕಾಲು ಕೆ.ಜಿ. ತೂಕದ ಬೆಳ್ಳಿಗದೆ ಮತ್ತು 12 ಸಾವಿರ ನಗದು, 'ದಸರಾ ಕೇಸರಿ' ವಿಜೇತರು ಒಂದು ಕೆ.ಜಿ. ತೂಕದ ಬೆಳ್ಳಿಗದೆ ಹಾಗೂ 12 ಸಾವಿರ ನಗದು ಬಹುಮಾನ ಪಡೆದರು. 'ದಸರಾ ಕಿಶೋರಿ' ಮತ್ತು 'ದಸರಾ ಕುಮಾರ್' ಪ್ರಶಸ್ತಿ ಗೆದ್ದವರಿಗೆ ಕ್ರಮವಾಗಿ ಮುಕ್ಕಾಲು ಕೆ.ಜಿ ಹಾಗೂ ಅರ್ಧ ಕೆ.ಜಿ. ತೂಕದ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಯಿತು.
ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು