ಎಂಜಿನಿಯರ್ ಕೈಲಿದ್ದ ಉಂಗುರ ನೋಡಿ ಮನಸ್ಸು ಬದಲಿಸಿದ ಚಾಲಕ!
Recommended Video
ಮೈಸೂರು, ಜನವರಿ 13: ಮೈಸೂರು ಬಸ್ ನಿಲ್ದಾಣದಿಂದ ಬೆಂಗಳೂರಿನ ಕಡೆ ಪ್ರಯಾಣಿಕರನ್ನು ಕರೆದೊಯ್ಯುವ ಕಾರೊಂದರಲ್ಲಿ ತೆರಳಿದ ಇಂಜಿನಿಯರ್ ಮೇಲೆ ಚಾಲಕನೇ ಹಲ್ಲೆ ನಡೆಸಿ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
ಮೈಸೂರಿನ ಗೌರಿಶಂಕರ ಬಡಾವಣೆಯ ನಿವಾಸಿ ಮಧು (33) ಎಂಬುವರೇ ಹಣ, ಚಿನ್ನಾಭರಣ ಕಳೆದುಕೊಂಡವರು. ಬೆಂಗಳೂರಿನ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಧು ರಜೆ ನಿಮಿತ್ತ ಮನೆಗೆ ಬಂದಿದ್ದರು. ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳುವ ಸಲುವಾಗಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾರೊಂದರ ಚಾಲಕ ಬೆಂಗಳೂರಿಗೆ ಡ್ರಾಪ್ ಮಾಡುತ್ತೇನೆ ಎಂದಿದ್ದಾನೆ. ಬಸ್ಗಿಂತ ಬೇಗ ತಲುಪಬಹುದೆಂಬ ಉದ್ದೇಶದಿಂದ ಮಧು ಕಾರನ್ನು ಹತ್ತಿ ಕುಳಿತಿದ್ದಾರೆ.
ದುಬಾರಿ ವಾಚ್ ಎಗರಿಸಲು ಸೂಟುಬೂಟಲ್ಲಿ ಬಂದ ಹೈಟೆಕ್ ಕಳ್ಳರು
ಈ ಸಂದರ್ಭ ಚಾಲಕ ಮಧುವಿನ ಕತ್ತು ಹಾಗೂ ಕೈ ಬೆರಳಲ್ಲಿದ್ದ ಉಂಗುರಗಳನ್ನು ನೋಡಿದ್ದು, ಆತನ ಬಳಿಯಿರುವ ಹಣ, ಚಿನ್ನ ದೋಚುವ ಸ್ಕೆಚ್ ಹಾಕಿದ್ದಾನೆ. ಹೀಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಗೆ ಕಾರನ್ನು ತಿರುಗಿಸಿ ಅಲ್ಲಿಂದ ಒಬ್ಬರನ್ನು ಪಿಕ್ ಅಪ್ ಮಾಡುವುದಿದೆ ಎಂದಿದ್ದಾನೆ. ಹೀಗಾಗಿ ಮಧು ಸುಮ್ಮನಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಚಾಲಕ ಮಧುವನ್ನು ಹೆದರಿಸಿದ್ದಲ್ಲದೆ, ಥಳಿಸಿ ಅವರ ಬಳಿಯಿದ್ದ ಎರಡು ಎಟಿಎಂನಿಂದ ಒಂದರಲ್ಲಿ 20, ಮತ್ತೊಂದರಲ್ಲಿ 23 ಸಾವಿರ ರೂ. ನಗದನ್ನು ಪೀಕಿಸಿ, ಅವರ ಕೈ ಬೆರಳಲ್ಲಿದ್ದ 5 ಗ್ರಾಂ ಚಿನ್ನದ ಉಂಗುರ, ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ನೊಂದ ಮಧು ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.