ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾಕ್ಕೆ ಚಾಲನೆ
ಮೈಸೂರು, ಅಕ್ಟೋಬರ್ 15: ಪೊಲೀಸರ ಬಿಗಿ ಬಂದೋಬಸ್ತ್ ನಡುವೆಯೇ ಕೊನೆಗೂ ಮಹಿಷ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮಹಿಷ ದಸರಾಕ್ಕೆ ಚಾಲನೆ ನೀಡಲಾಗಿದೆ.
ಮೈಸೂರಿನ ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿಂದು ಸರಳವಾಗಿ ಮಹಿಷ ದಸರಾ ಆಚರಣೆ ಮಾಡಲಾಗಿದೆ. ಮಹಿಷನ ಭಾವಚಿತ್ರಕ್ಕೆ ಆಚರಣಾ ಸಮಿತಿ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ಪೊಲೀಸ್ ಸರ್ಪಗಾವಲಿನಲ್ಲಿ ಮಹಿಷನಿಗೆ ಮಾಲಾರ್ಪಣೆ ಮಾಡಲಾಯಿತು.
ಅ.17ರಿಂದ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಮಾಜಿ ಮೇಯರ್ ಪುರುಷೋತ್ತಮ್, ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದರಾಮು ಹಾಗೂ ಪ್ರೊ.ಮಹೇಶ್ ಚಂದ್ರಗುರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಪೊಲೀಸರು ಯಾವುದೇ ಮೆರವಣಿಗೆ, ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡದ ಕಾರಣ ಸರಳವಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ನಡೆಯಿತು.
ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಶೋಕಪುರಂನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷ ದಸರಾ ಆಚರಣೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ 2014ರಿಂದಲೂ ಮಹಿಷನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು.
ಈ ಬಾರಿ ಅ.15 ರಂದು ಚಾಮುಂಡಿಬೆಟ್ಟದಲ್ಲಿಯೇ ಆಚರಿಸಲು ಉದ್ದೇಶಿಸಿದ್ದೆವು. ಆದರೆ ಜಿಲ್ಲಾಡಳಿತ ಅ.14 ಮಧ್ಯರಾತ್ರಿ 12 ಗಂಟೆಯಿಂದಲೇ ಚಾಮುಂಡಿಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದೆ. ರಾಜಕೀಯ ಒತ್ತಡಗಳಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು ಕಾನೂನಾತ್ಮಕವಾಗಿ ಹೋರಾಟ ನಡೆಸಲಿದ್ದೇವೆ. ನಮ್ಮ ಧಾರ್ಮಿಕ ಭಾವನೆಗಳಿಗೆ, ಸಂಸ್ಕೃತಿ ಆಚರಣೆಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.
ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಆಗುತ್ತಿದೆ. ನಮ್ಮನ್ನು ಏಕೆ ಬೆಟ್ಟಕ್ಕೆ ತಡೆದಿದ್ದೀರಿ. ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುತ್ತೇವೆ ಎಂದು ಹೇಳಿದರು.
300 ಜನ ಸೇರಿ ದಸರಾ ಮಾಡುವವರು 50 ಜನ ಸೇರಿ ಮಾಡುವ ಮಹಿಷ ಆಚರಣೆಗೆ ಏಕೆ ಅವಕಾಶ ನೀಡಿಲ್ಲ. ನಾಳೆ ನಾವು ವಿಡಿಯೋ ಮಾಡುತ್ತೇವೆ. 200 ಜನರ ಮೇಲಿದ್ದಲ್ಲಿ ನಾವೇ ಜಿಲ್ಲಾಡಳಿತದ ಮೇಲೆ ಕೇಸ್ ಹಾಕುತ್ತೇವೆ. ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ಮಾಡಿದ್ದೇವು, ಹಾಗಿದ್ದರೂ ಏಕೆ ನಮ್ಮನ್ನು ಕರೆದು ಸಾಧಕ ಬಾಧಕ ಚರ್ಚೆ ಮಾಡಲಿಲ್ಲ. ಈ ಹಿಂದೆ 6 ವರ್ಷ ಇದೇ ಜಿಲ್ಲಾಡಳಿತ ನಮಗೆ ಪೊಲೀಸ್ ಭದ್ರತೆ ನೀಡಿ ಮಹಿಷ ದಸರಾ ಆಚರಣೆ ಮಾಡಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.