ಕೆಎಸ್ಓಯು: ನೂತನ ಕುಲಪತಿ ವಿದ್ಯಾಶಂಕರ್ ಅಧಿಕಾರ ಸ್ವೀಕಾರ
ಮೈಸೂರು, ಮೇ 30: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ವಿದ್ಯಾಶಂಕರ್ ನೇಮಕವಾಗಿದ್ದು, ಇಂದು ಅವರು ಅಧಿಕಾರ ಸ್ವೀಕರಿಸಿದರು. ಡಾ.ವಿದ್ಯಾಶಂಕರ್ ಅವರಿಗೆ ಹಿಂದಿನ ಕುಲಪತಿಗಳಾದ ಪ್ರೊ.ಶಿವಲಿಂಗಯ್ಯ ಹೂಗುಚ್ಛ ನೀಡಿ ಸ್ವಾಗತಿಸಿ ಅಧಿಕಾರ ಹಸ್ತಾಂತರಗೈದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಹೊಸ ಸಾರಥಿ
ಡಾ.ವಿದ್ಯಾಶಂಕರ್ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಮೂರು ವರ್ಷಗಳ ಅವಧಿಗೆ ಕೆಎಸ್ ಓಯು ಕುಲಪತಿಗಳಾಗಿ ನೇಮಕವಾಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕುಲಪತಿಯಾಗಿ ನೇಮಕಗೊಂಡಿದ್ದು ಸಂತೋಷವಾಗಿದೆ. ಒಳ್ಳೆಯ ಕೆಲಸ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಒತ್ತು ಕೊಡುತ್ತೇನೆ ಎಂದರು.
ಮೊದಲು ಇಲ್ಲಿರುವ ಸಮಸ್ಯೆಗಳು ಏನೆಂದು ತಿಳಿಯಬೇಕಿದೆ. ನಂತರ ಅವುಗಳನ್ನು ಬಗೆಹರಿಸುತ್ತೇನೆ. ನ್ಯೂನತೆಗಳನ್ನು ಸರಿಪಡಿಸಿ ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸುತ್ತೇನೆ ಎಂದು ತಿಳಿಸಿದರು.