"ದಸರಾ ಉದ್ಘಾಟನೆ ನನಗೆ ಸಿಕ್ಕಿದ ಬಹು ದೊಡ್ಡ ಗೌರವ"
ಮೈಸೂರು, ಅಕ್ಟೋಬರ್ 17: "ನಾಡಹಬ್ಬ ದಸರಾ ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನಗೆ ದೊರಕಿದ ಬಹು ದೊಡ್ಡ ಗೌರವ. ಕೊರೊನಾ ವಾರಿಯರ್ ಗಳಿಗೆ ಅಭಿನಂದಿಸಿದ್ದು ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವ. ಇದಕ್ಕೆ ನಾನು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ..." ಎಂದು ನಾಡಹಬ್ಬ ದಸರಾ ಉದ್ಘಾಟಿಸಿದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಡಾ.ಸಿ.ಎನ್. ಮಂಜುನಾಥ್ ಅವರು ಭಾವುಕವಾಗಿ ನುಡಿದರು.
ದಸರಾ ಮಹೋತ್ಸವವನ್ನು ಉದ್ಘಾಟಿಸಿ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, "ದಸರಾದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ನಾನು ಚಾಮುಂಡಿ ದೇವಿಯಲ್ಲಿ ಮೂರು ವಿಚಾರಗಳನ್ನು ಬೇಡಿಕೊಂಡೆ. ಕೊರೊನಾಗೆ ಶೀಘ್ರದಲ್ಲೇ ಲಸಿಕೆ ಸಿಗಬೇಕು. ಜಗತ್ತಿನಿಂದಲೇ ಕೊರೊನಾ ನಿವಾರಣೆಯಾಗಬೇಕು. ಜಲಪ್ರವಾಹ ನಿಲ್ಲಬೇಕು ಎಂದು ಪ್ರಾರ್ಥಿಸಿದ್ದೇನೆ" ಎಂದರು.
ಇದೇ ಸಂದರ್ಭ, ಕನ್ನಡ ಭಾಷೆಯ ಕುರಿತೂ ಮಾತನಾಡಿ, ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು. ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್ ಆಗಿದೆ. ಎರಡರ ನಡುವೆ ಸಮತೋಲನವಾಗಬೇಕು ಎಂದು ಹೇಳಿದರು. ಮುಂದೆ ಓದಿ...
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
"ಕೊರೊನಾ ಕಳಂಕವಲ್ಲ, ಆತಂಕ"
ಕೊರೊನಾ ಸೋಂಕು ಕಳಂಕವಲ್ಲ. ಆದರೆ ಕೊರೊನಾ ಸೋಂಕಿತರನ್ನು ಬೇರೆಯದ್ದೇ ರೀತಿ ನೋಡಲಾಗುತ್ತಿದೆ. ಕಾಲ ಬದಲಾಗಿಲ್ಲ. ಜನ ಬದಲಾಗಿದ್ದಾರೆ. ಜೀವನ ಶೈಲಿ ಬದಲಾಗಿದೆ. ನಾವು ಚಂದ್ರ, ಮಂಗಳಯಾನದ ಬಗ್ಗೆ ಮಾತನಾಡುತ್ತಿದ್ದೇವೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತ ಗೊತ್ತಿರೋದಿಲ್ಲ. ಫೇಸ್ಬುಕ್ನಲ್ಲೇ ಗೆಳೆಯರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತೇವೆ. ಆದರೆ ನಿಜವಾದ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.
ಸಾಮಾಜಿಕ ಜಾಲತಾಣಗಳ ಬಗ್ಗೆ ಅಸಮಾಧಾನ
ಸಾಮಾಜಿಕ ಜಾಲತಾಣಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಸಮಾಜದ ಸೇತುವೆಯಾಗಿ ಕೆಲಸ ಮಾಡಬೇಕಿರುವ ಸೋಷಿಯಲ್ ಮೀಡಿಯಾಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಸಮಾಜಕ್ಕೆ ಒಳಿತು ಮಾಡುವ ಕೆಲಸ ಸಾಮಾಜಿಕ ಜಾಲತಾಣಗಳಿಂದ ಆಗಬೇಕು" ಎಂದರು.
"ರೋಗಿಗಳ ಪರವಾಗಿ ವೈದ್ಯರು ಪ್ರಾರ್ಥಿಸುತ್ತಾರೆ"
ಭಾಷಣದುದ್ದಕ್ಕೂ ಡಾ. ಮಂಜುನಾಥ್ ಅವರು ವೈದ್ಯರ ಸಮಸ್ಯೆಗಳನ್ನು ತೆರೆದಿಟ್ಟರು. ವೈದ್ಯರು ಮನೆಯಲ್ಲಿ ಪೂಜೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಗಂಭೀರ ರೋಗಿಗಳ ಪರವಾಗಿ ಎಷ್ಟೋ ವೈದ್ಯರು ಹರಕೆ ಕಟ್ಟಿಕೊಂಡಿದ್ದಾರೆ. ರೋಗಿಯ ಆರೋಗ್ಯವೇ ನನ್ನ ಭಾಗ್ಯ ಅಂತಾರೆ ವೈದ್ಯರು.ಆದರೆ ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ, ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು."ಕೊರೊನಾ ಕಡಿಮೆಯಾಗುವ ವಿಶ್ವಾಸವಿದೆ"
ಕೊರೊನಾಗೆ ಈ ವರ್ಷ ಲಸಿಕೆ ಸಿಗುವುದಿಲ್ಲ. ಮುಂದಿನ ಫೆಬ್ರವರಿ, ಜೂನ್ ವೇಳೆ ಲಸಿಗೆ ಸಿಗುವ ಸಾಧ್ಯತೆ ಇದೆ. ಮೂರನೇ ಹಂತದಲ್ಲಿ ಲಸಿಕೆ ಪ್ರಯೋಗ ನಡೆಯುತ್ತಿದೆ. ಸೋಂಕಿನ ಪ್ರಮಾಣ ಕಡಿಮೆ ಆಗುವ ವಿಶ್ವಾಸವಿದೆ ಎಂದರು.ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮಾಡಬಾರದ್ದು ಮಾಡಿದರೆ, ತಿನ್ನಬಾರದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ ಎಂದು ಹೇಳಿದರು.