ಇನ್ನೂ ನಿಂತಿಲ್ಲ ವರದಕ್ಷಿಣೆ ಕಿರುಕುಳವೆಂಬ ಪೆಡಂಭೂತ
ಮೈಸೂರು, ಜುಲೈ 10: ಇಡೀ ಮಹಿಳಾ ಸಮಾಜಕ್ಕೆ ಶಾಪವಾಗಿದ್ದ ವರದಕ್ಷಿಣೆ ಕಿರುಕುಳ ದಿನೇ ದಿನೇ ವಿದ್ಯಾವಂತ ಜಿಲ್ಲೆಗಳಲ್ಲೇ ಹೆಚ್ಚುತ್ತಿದೆ. ಇದುವರೆಗೂ ಕಳೆದ ನಾಲ್ಕು ವರ್ಷದಿಂದೀಚೆಗೆ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಬೇಸರದ ಸಂಗತಿ.
1961ರಲ್ಲಿಯೇ ವರದಕ್ಷಿಣೆ ನಿಯಂತ್ರಣಕ್ಕೆ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂದರೂ ಈ ಪಿಡುಗನ್ನು ನಿಯಂತ್ರಿಸಲು ಈವರೆಗೂ ಸಾಧ್ಯವಾಗಿಲ್ಲ. ವರನ ಕುಟುಂಬದ ಹಣದ ವ್ಯಾಮೋಹಕ್ಕೆ ವಧುವಿನ ಬಾಳು ನರಕದ ಕೂಪವಾಗಬಾರದೆಂಬ ಉದ್ದೇಶದಿಂದ ಕಾನೂನು ಜಾರಿ ಮಾಡಲಾಗಿದ್ದು, ಆರೋಪಿಗಳಿಗೆ ಜಾಮೀನು ರಹಿತ ಶಿಕ್ಷೆ ನೀಡಲಾಗುತ್ತದೆ. ಇಷ್ಟಾಗಿಯೂ ವರದಕ್ಷಿಣೆ ಕಿರುಕುಳ ಮುಂದುವರಿದಿದೆ.
ಮೈಸೂರಿನಲ್ಲಿ ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ
ವರದಕ್ಷಿಣೆ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ 2016ರಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ವರದಕ್ಷಿಣೆ ಕಿರುಕುಳ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದರಲ್ಲಿ 60ಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯದ್ದಾಗಿದೆ. ಅದೇ ರೀತಿ, 2017ರಲ್ಲಿ ರಾಜ್ಯದಲ್ಲಿ ಬೆಳಕಿಗೆ ಬಂದ 2,111 ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಜಿಲ್ಲೆಯಲ್ಲಿ 50 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 2,095 ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿನ 50ಕ್ಕೂ ಹೆಚ್ಚು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ. ಈ ವರ್ಷ ಕೂಡ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮುಂದುವರೆದಿದ್ದು, ಈವರೆಗೆ 10ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ ಪ್ರಕರಣವೂ ಹೆಚ್ಚಾಗುತ್ತಲೇ ಇದೆ.
ವರದಕ್ಷಿಣೆ ಪಡೆದು ಹಾಗೂ ನೀಡಿ ವಿವಾಹವಾಗುವುದು ಅಪರಾಧ ಎಂಬ ಅರಿವು ಯುವಜನತೆಯಲ್ಲಿ ಮೂಡಬೇಕು. ಮಕ್ಕಳ ಹಿತದೃಷ್ಟಿಯಿಂದ ಕುಟುಂಬದ ಸದಸ್ಯರು ಕೂಡ ವರದಕ್ಷಿಣೆ ವಿರುದ್ಧ ಸಮರ ಸಾರಬೇಕು. ವರದಕ್ಷಿಣೆ ಬೇಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಬೇಕು. ನೀಡುವವರಿಲ್ಲದಿದ್ದರೆ ತೆಗೆದುಕೊಳ್ಳುವವರು ಕೂಡ ಇರುವುದಿಲ್ಲ' ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕಡೆಯವರು ಮಾಡಿದ್ದೇನು ಗೊತ್ತೇ?
ಗ್ರಾಮೀಣ ಪ್ರದೇಶದಲ್ಲಿ ವರದಕ್ಷಿಣೆ ಇನ್ನೂ ಜೀವಂತವಾಗಿದೆ. ಹೇಗಾದರೂ ಮಾಡಿ ಆದಷ್ಟು ಬೇಗ ಮಗಳ ವಿವಾಹ ಮಾಡಬೇಕೆಂಬ ಮನೋಭಾವ ಹೆತ್ತವರಲ್ಲಿದೆ. ಇದು ವರದಕ್ಷಿಣೆ ಜೀವಂತವಾಗಿರಲು ಕಾರಣವಾಗಿದೆ. ಈ ಪಿಡುಗು ತೊಲಗಬೇಕಾದರೆ ಜನಜಾಗೃತಿ ಅತ್ಯಗತ್ಯ. ವರದಕ್ಷಿಣೆ ನೀಡುವ ಮತ್ತು ತೆಗೆದುಕೊಳ್ಳುವ ಅಪರಾಧಕ್ಕೆ ಕನಿಷ್ಠ ಐದು ವರ್ಷ ಕಾರಾಗೃಹವಾಸ ಹಾಗೂ 15 ಸಾವಿರದವರೆಗೆ ಜುಲ್ಮಾನೆ ಹಾಕಲಾಗುತ್ತದಾದರೂ ಇದ್ಯಾವುದಕ್ಕೂ ಕ್ಯಾರೆ ಅನ್ನದೇ ವರದಕ್ಷಿಣೆ ಕಿರುಕುಳ ನಡೆಯುತ್ತಿದೆ.
ಬೂಕನಕೆರೆಯಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ನಾದಿನಿಯಿಂದ ಗೃಹಿಣಿಯ ಹತ್ಯೆ
ಅನೈತಿಕ ಸಂಬಂಧ, ಅತ್ತೆ-ಮಾವನೊಂದಿಗೆ ಹೊಂದಾಣಿಕೆ ಕೊರತೆ, ಕುಟುಂಬ ಕಲಹವನ್ನು ವರದಕ್ಷಿಣೆ ಪ್ರಕರಣ ಎಂದು ಉಲ್ಲೇಖಿಸಲಾಗುತ್ತಿದೆ. ಇದರೊಟ್ಟಿಗೆ ಪ್ರೇಮ ವಿವಾಹ, ಅಂತರ್ಜಾತಿ ವಿವಾಹದಲ್ಲಿ ಕೂಡ ಸಂಬಂಧ ಹಳಸಿ, ದೂರು ದಾಖಲಿಸುವ ಸಾಧ್ಯತೆ ಇದೆ. ಆದರೆ ಇದ್ಯಾವುದೂ ವರದಕ್ಷಿಣೆ ಕಿರುಕುಳವಲ್ಲ. ಈ ಕುರಿತಾಗಿ ಕಾನೂನನ್ನು ಅಧಿಕಾರಿಗಳು ಮತ್ತಷ್ಟು ಬಿಗಿಗೊಳಿಸುವುದರಿಂದ ಈ ಪಿಡುಗನ್ನು ಇಳಿಮುಖಗೊಳಿಸಬಹುದಾಗಿದೆ.