ಮೈಸೂರು: ಹೊಲದಲ್ಲಿ ಕದ್ದ ವಸ್ತುಗಳ ಹಂಚಿಕೆ ಜಗಳದಲ್ಲಿ ಇಬ್ಬರ ಕೊಲೆ
ಮೈಸೂರು, ಸೆಪ್ಟೆಂಬರ್ 16: ಕದ್ದ ವಸ್ತುಗಳನ್ನು ಹಂಚಿಕೊಳ್ಳುವ ವಿಚಾರಕ್ಕೆ ಜಗಳವಾಗಿ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ.
ಹೊಲಗಳಲ್ಲಿ ಕಳವು ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಮೂವರ ತಂಡದಲ್ಲಿ ಇಬ್ಬರು ಸಹೋದರರು ಹಾಗೂ ಮತ್ತೊಬ್ಬ ವ್ಯಕ್ತಿ ಇದ್ದ. ಸಹೋದರರಾದ ಮುನಿಯ, ರಾಜು ಮತ್ತು ರಾಚಯ್ಯ ಎಂಬ ಇನ್ನೊಬ್ಬರು ಕಳ್ಳತನದಲ್ಲಿ ತೊಡಗಿದ್ದರು.
ಮನೆ ಮುಂದೆ ವ್ಹೀಲಿಂಗ್ ಮಾಡಬೇಡಿ ಎಂದದ್ದಕ್ಕೆ ಕೊಲೆಯಾದ ಯುವಕ
ರಾತ್ರಿ ವೇಳೆ ಹೊಲಗಳಿಗೆ ನುಗ್ಗಿ ಪಂಪ್ ಸೆಟ್, ಸ್ಟಾರ್ಟರ್, ಕೃಷಿ ಉತ್ಪನ್ನ ಕದಿಯುವುದೇ ಇವರ ಉದ್ಯೋಗವಾಗಿತ್ತು. ಕಳೆದ ತಿಂಗಳು ಮೂವರೂ ಜತೆಯಾಗಿ ಗೌಡನಕಟ್ಟೆ ಗ್ರಾಮದ ಜಮೀನಿನೊಂದರಲ್ಲಿ ಪಂಪ್ ಸೆಟ್ ಜತೆಗೆ ವೈರ್ ಕದ್ದಿದ್ದರು. ಆದರೆ, ಅದನ್ನು ಹಂಚಿಕೊಳ್ಳುವಾಗ, ರಾಚಯ್ಯನು ಸಹೋದರರಾದ ಮುನಿಯ ಮತ್ತು ರಾಜು ಬಳಿ ಹೆಚ್ಚಿನ ಪಾಲು ಕೇಳಿದ್ದನು.
ಆಗ ಇಬ್ಬರೂ ಸಹೋದರರು ಸೇರಿ ರಾಚಯ್ಯನನ್ನು ಹತ್ಯೆಗೈದಿದ್ದರು. ಗುರುತು ಸಿಗದಂತೆ ಮುಖ ಸುಟ್ಟು ಹಾಕಿ ಪರಾರಿಯಾಗಿದ್ದರು. ಕೊಲೆಯಾದ ರಾಚಯ್ಯ ದೇವಾಲಯಗಳಲ್ಲಿ ಹುಂಡಿ ಕಳ್ಳತನ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದಿದೆ.
ಇದೇ ವಿಷಯವನ್ನು ಆಧಾರವನ್ನಾಗಿಸಿಟ್ಟುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ, ಮೊದಲ ಕೊಲೆಯ ಬಳಿಕ ಸಹೋದರರಿಬ್ಬರೂ ತಲೆಮರೆಸಿಕೊಂಡಿದ್ದರು. ಇವರಿಬ್ಬರ ಮಧ್ಯೆಯೂ ಮತ್ತೆ ಕದ್ದ ವಸ್ತುಗಳ ಹಂಚಿಕೆ ವಿಚಾರಕ್ಕೆ ಗಲಾಟೆಯಾಗಿತ್ತು.
ಈ ವೇಳೆ ಮುನಿಯ, ಸೋದರ ರಾಜುವಿನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈಗ ತಲೆಮರೆಸಿಕೊಂಡಿದ್ದ ಮುನಿಯನನ್ನು ಪಿರಿಯಾಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಳಿಕ ವಿಚಾರಣೆ ಕೈಗೊಂಡಾಗ ಮುನಿಯ, ತಮ್ಮನಾದ ರಾಜು ಹಾಗೂ ರಾಚಯ್ಯನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.