'ಆಯುಧ ಹಿಡಿದ ಹಿಂದೂ ದೇವರ ಪೂಜೆ ಮಾಡಬೇಡಿ'
ಮೈಸೂರು, ಏ. 24: 'ಆಯುಧ ಹಿಡಿದ ಹಿಂದೂ ದೇವರುಗಳ ಪೂಜೆ ಮಾಡಬೇಡಿ. ಅಂತಹ ದೇವರುಗಳನ್ನು ಆರಾಧಿಸುವುದರಿಂದ ಆ ದೇವರುಗಳಲ್ಲಿನ ಉಗ್ರ ಸ್ವರೂಪವು ನಿಮ್ಮ ಮೇಲೂ ಆವಾಹನೆಯಾಗಬಲ್ಲದು. ಆದ್ದರಿಂದ ಆ ದೇವಾನುದೇವತೆಗಳನ್ನು ಪೂಜಿಸಬಾರದು' ಎಂದು ಮೈಸೂರಿನ ಸಾಹಿತಿ ಕೆಎಸ್ ಭಗವಾನ್ ಅವರು ಭಕ್ತರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಆಯುಧಗಳನ್ನು ಹಿಡಿದಿರುವ ದೇವರ ಭಾವಚಿತ್ರಗಳನ್ನು ಮಾರಾಟ ಮಾಡಬಾರದು ಎಂದೂ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಭಗವಾನ್ ಆಗ್ರಹ:
'ಸೂಕ್ಷ್ಮವಾಗಿ ಗಮನಿಸಿದಾಗ ಬಹುತೇಕ ಎಲ್ಲ ಹಿಂದೂ ದೇವರುಗಳ ಕೈಯಲ್ಲಿ ಒಂದೊಂದು ರೀತಿಯ ಆಯುಧ ಇದ್ದೇ ಇರುತ್ತದೆ. ಹಾಗಾಗಿ ಭಕ್ತರಲ್ಲೂ ದುಷ್ಟ ನಿಗ್ರಹ ಗುಣ ಮೇಳೈಸುವ ಅಪಾಯವಿರುತ್ತದೆ. ಆದ್ದರಿಂದ ಹಿಂದೂ ದೇವರುಗಳ ಆರಾಧನೆಯಿಂದ ದೂರವಿರಿ' ಎಂದು ಭಗವಾನ್ ಅವರು ಆಗ್ರಹಪೂರ್ವಕ ಕಳಕಳಿ ವ್ಯಕ್ತಪಡಿಸಿದ್ದಾರೆ. [ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್ ಮಾಸ್ಟರ್]
'ನೋಡಿ, ಅದೇ ಕ್ರೈಸ್ತ ಧರ್ಮದ ಪ್ರತಿಪಾದಕ ಯೇಸು, ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್, ಬೌದ್ಧ ಧರ್ಮದ ಪ್ರತಿಪಾದಕ ಭಗವಾನ್ ಬುದ್ಧ ಮುಂತಾದವರ ಭಾವಚಿತ್ರಗಳಲ್ಲಿ ಮಾರಕ ಆಯುಧಗಳೇ ಇರುವುದಿಲ್ಲ. ಹಾಗಾಗಿ ಅಂತಯ ಚಿತ್ರಗಳು ಶಾಂತಿ ಸಂದೇಶ ಸಾರುತ್ತವೆ' ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
'ದೇವತೆಗಳಿಗೆ ಶಕ್ತಿ ಸ್ವರೂಪಿ, ಶಾಂತ ಸ್ವರೂಪಿ ಎನ್ನುತ್ತಾರೆ. ಹಾಗಾದರೆ ದೇವತೆಗಳಿಗೆ ಆಯುಧ ಯಾಕೆ ಬೇಕು ಎಂದು ತಾರ್ಖಿಕವಾಗಿ ಪ್ರಶ್ನಿಸಿದ್ದಾರಲ್ಲದೆ, ಅಂತಹಾ ದೇವತೆಗಳಿಗೆ ಪೂಜೆ ಮಾಡುವ ಪರಿಪಾಠವೂ ನಿಲ್ಲಬೇಕು' ಎಂಬುದು ಭಗವಾನ್ ವಾದವಾಗಿದೆ.