ಲೂಟಿ ಹಣದಿಂದ ಓಟು ಕೇಳಿದರೆ ಸುಮ್ಮನಿರೋಲ್ಲ: ಬಿಎಸ್ ವೈ
ನಂಜನಗೂಡು ತಾಲೂಕಿನ ದೇಬೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಡ್ಡಿಯೂರಪ್ಪ, ರಾಜ್ಯ ಲೂಟಿ ಮಾಡಿದ ಹಣದಿಂದ ಓಟು ಕೇಳಬೇಡಿ ಎಂದು ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದರು.
ಮೈಸೂರು, ಮಾರ್ಚ್ 25: ಕಾಂಗ್ರೆಸ್ಸಿಗರು ಒಳ್ಳೆಯ ಕೆಲಸ ಮಾಡಿ ಓಟು ಕೇಳಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯ ಲೂಟಿ ಮಾಡಿ ಅದರಿಂದ ಗಳಿಸಿದ ಹಣ ಚೆಲ್ಲಿ ಓಟು ಕೇಳಿದರೆ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಉಪಚುನಾವಣೆಯ ಅಂಗವಾಗಿ ನಂಜನಗೂಡು ತಾಲೂಕಿನ ದೇಬೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.[ಇವರು ಪಕ್ಷವನ್ನು ಕೆಡವುತ್ತಾರೋ, ಕಟ್ಟುತ್ತಾರೋ? ವಿಶ್ವನಾಥ್]
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂಜನಗೂಡು ಕ್ಷೇತ್ರ ಸೇರಿದಂತೆ ಎಲ್ಲಿಯೂ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕಳಪೆ ಕಾಮಗಾರಿಗಳ ಮೂಲಕ ತೇಪೆ ಬಳಿಯುವ ಕೆಲಸ ಮಾಡಿಸುತ್ತಿದ್ದಾರೆ. ಹಳೇ ಕಲ್ಲು ಹೊಸ ಬಿಲ್ಲು ಎಂಬಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ರಾಜ್ಯವನ್ನು ಲೂಟಿ ಹೊಡೆದು ಹಗಲು ದರೋಡೆ ಮಾಡುತ್ತಿರುವ ಅವರನ್ನು ಜನರು, ರೈತರು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.[ಈ ಬಾರಿ ಯಾರಿಗೆ ಸಿಗಲಿದೆ ನಂಜುಂಡೇಶ್ವರ ಪ್ರಸಾದ?]
ಹಿಟ್ಲರ್ ನನ್ನು ಮೀರಿಸಿದ ಸಿದ್ಧರಾಮಯ್ಯ ಹಣಬಲದಿಂದ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ತಮ್ಮ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಸ್ಥಾನವಿಲ್ಲ ಎಂದು ತೋರಿಸಿದ್ದಾರೆ ಎಂದು ಪಕ್ಷದ ಅಭ್ಯರ್ಥಿ ಶ್ರಿನಿವಾಸ್ ಪ್ರಸಾದ್ ಪರ ಪ್ರಚಾರ ಮಾಡಿದರು.
ಸಿದ್ಧರಾಮಯ್ಯ ಅವರ ದುರಹಂಕಾರ, ಕೆಟ್ಟ ಆಡಳಿತ ವೈಖರಿಯಿಂದ ಬೇಸತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಂಥ ಹಿರಿಯ ನಾಯಕರೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುತ್ತಿದ್ದಾರೆ. ಜನರಿಗೂ ಸಹ ಸಿದ್ಧರಾಮಯ್ಯ ಅವರ ನಡವಳಿಕೆಯಿಂದ ಬೇಸರವಾದೆ ಎಂದರು.[ಕೃಷ್ಣ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ: ಯಡಿಯೂರಪ್ಪ]
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿ ಬಂದಾಗಲೂ ಸಹ ವಿಶ್ರಾಂತಿ ಪಡೆಯದೆ ಕಚೇರಿಗೆ ಬಂದು ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಆದರೆ ನೀವು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದರೆ ರಾಜ್ಯವಾಳಲು ಆಗುತ್ತದೆಯೇ ಎಂದು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.[ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?]
ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ವಿ.ಶ್ರೀನಿವಾಸ ಪ್ರಸಾದ್, ಸಂಸತ್ ಸದಸ್ಯರಾದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ವಿ.ಸೋಮಣ್ಣ ಮುಂತಾದವರು ಉಪಸ್ಥಿತರಿದ್ದರು. ಸದ್ಯ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಕಾರಣಕ್ಕಾಗಿ ತೆರವಾದ ಸ್ಥಾನಕ್ಕಾಗಿ ಈ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 13 ರಂದು ಫಲಿತಾಂಶ ಹೊರಬೀಳಲಿದೆ.