ನಂಜನಗೂಡಲ್ಲಿ ಹುಚ್ಚು ನಾಯಿ ಕಡಿದು ಐವರು ಮಕ್ಕಳಿಗೆ ಗಂಭೀರ ಗಾಯ
ಮೈಸೂರು, ಫೆಬ್ರವರಿ 12: ಹುಚ್ಚು ನಾಯಿಯೊಂದು ಒಂದೇ ದಿನದಲ್ಲಿ ಐದು ಮಕ್ಕಳನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ನಂಜನಗೂಡಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾನಗರ ಬಡಾವಣೆಯ ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯದ ಬಳಿಯಿರುವ ಮನೆಗಳ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ ಹುಚ್ಚು ನಾಯಿ ಕಡಿದಿದ್ದು, ಇದರಿಂದ ವಿಧೀಶ (6), ಶ್ರಾವಣಿ (5), ನಿವೇದಿತಾ(8), ಆಯುಷಿ (5), ಯೋಗಿತಾ (5) ಎಂಬ ಐವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಕರು ಕೊಂದು ತಿಂದ ಬೀದಿ ನಾಯಿಗಳು; ಓಡಾಡಲು ಭಯಪಡುತ್ತಿರುವ ಜನ
ವಿಧೀಶ ಎಂಬ ಬಾಲಕಿಯ ಕೆನ್ನೆ ಹಾಗೂ ತುಟಿ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಈ ವೇಳೆ ಸ್ಥಳೀಯರು ಬಂದು ಬಾಲಕಿಯನ್ನು ಕಾಪಾಡಿದ್ದು ಬಳಿಕ ಮಕ್ಕಳನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚುನಾಯಿಯನ್ನು ಸಾರ್ವಜನಿಕರೇ ಹೊಡೆದು ಸಾಯಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಬಾಲಕಿ ವಿಧೀಶಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಾಯಿ ಕಡಿತದಿಂದ ಗಾಯಗೊಂಡ ಮಕ್ಕಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಲಭ್ಯವಿಲ್ಲವೆಂದು ಮೈಸೂರಿಗೆ ಸಾಗಹಾಕಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿಯೇ ನಾಯಿ ಕಡಿತಕ್ಕೆ ಚಿಕಿತ್ಸೆ ಲಭ್ಯವಿಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿಧ್ವನಿ ವೇದಿಕೆಯ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ನಾಯಿ ಕಡಿತಕ್ಕೆ ಚುಚ್ಚುಮದ್ದನ್ನು ಮೈಸೂರಿನ ಆಸ್ಪತ್ರೆಯಿಂದ ತರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ನಗರದಾದ್ಯಂತ ಎಲ್ಲ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಪೋಷಕರು ಮಕ್ಕಳನ್ನು ಹೊರ ಬಿಡಲು ಭಯ ಪಡುವಂತಾಗಿದೆ.
ಬೆಳಗಾವಿಯಲ್ಲಿ ಮತ್ತೆ ಬೀದಿ ನಾಯಿ ಹಾವಳಿ; 7 ವರ್ಷದ ಬಾಲಕನ ಮೇಲೆ ದಾಳಿ
ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಗಮನ ಸೆಳೆದು ಬೀದಿನಾಯಿಗಳ ಹಾವಳಿ ತಡೆಗೆ ಕ್ರಮ ವಹಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಕ್ರಮಗಳನ್ನು ಸಂಬಂಧಿಸಿದವರು ಕೈಗೊಳ್ಳದ ಕಾರಣ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇನ್ನಾದರೂ ನಗರಸಭಾ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳು ಎಚ್ಚೆತ್ತುಕೊಂಡು ಬೀದಿನಾಯಿಗಳ ಹಾವಳಿ ತಡೆಗೆ ಕ್ರಮಕೊಳ್ಳುವಂತೆ ಆಗ್ರಹಿಸಿದ್ದಾರೆ.