ತಿ.ನರಸಿಪುರದಲ್ಲಿ ಮಹದೇವಪ್ಪ ಪುತ್ರ ಸ್ಪರ್ಧಿಸುವುದು ನಿಜವೇ..?
ಮೈಸೂರು, ಏಪ್ರಿಲ್ 14: "ನಾನು ಕಾಂಗ್ರೆಸ್ ಟಿಕೇಟ್ ವಿಚಾರವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧನಾಗಿರುತ್ತೇನೆ. ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸೂಚನೇ ನೀಡುತ್ತೋ ಅಲ್ಲಿ ನಿಲ್ಲುತ್ತೇನೆ. ಒಂದು ವೇಳೆ ಟಿಕೇಟ್ ಕೊಡದಿದ್ದರೆ ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ ಎಂದು ಶಾಸಕ ಮತ್ತು ಲೋಕೋಪಯೋಗಿ ಸಚಿವ ಡಾ.ಹೆಚ್ .ಸಿ ಮಹದೇಪ್ಪ ಹೇಳಿದ್ದಾರೆ.
ಮಗನಿಗಾಗಿ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಡಾ. ಹೆಚ್. ಸಿ ಮಹದೇವಪ್ಪ?
ಮೈಸೂರಿನಲ್ಲಿ ಇಂದು(ಏ.14) ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ನಾನು ಇಂತಹದ್ದೇ ಕ್ಷೇತ್ರಕ್ಕೆ ಟಿಕೇಟ್ ಕೊಡಿ ಅಂತ ಯಾವುದೇ ಅರ್ಜಿ ಹಾಕಿಲ್ಲ. ತಮ್ಮ ಮಗ ಸುನೀಲ್ ಬೋಸ್ ಜೆಡಿಎಸ್ ಸೇರುವ ಬಗ್ಗೆ ಚರ್ಚೆ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಆತ ಎಂದಿಗೂ ಆ ರೀತಿ ನಿರ್ಧಾರ ಮಾಡಿಲ್ಲ" ಎಂದು ತಮ್ಮ ಹಾಗೂ ಮಗನ ಸ್ಪರ್ಧೆ ವಿಚಾರದ ಗುಟ್ಟನ್ನು ಬಿಟ್ಟುಕೊಡದೆ ಜಾಣ ಪ್ರತಿಕ್ರಿಯೆ ನೀಡಿದರು ಮಹದೇವಪ್ಪ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
"ದೇಶದಲ್ಲಿ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸಿ ಕೋಮು ಶಕ್ತಿಯನ್ನು ಮಟ್ಟಹಾಕಬೇಕಿದೆ. ಹಾಗಾಗಿ ಜಾತ್ಯತೀತ ಶಕ್ತಿಗಳು ಸಂಘಟನಾತ್ಮಕ ಹೋರಾಟಗಳ ಮೂಲಕ ಹೋರಾಡಬೇಕೆಂಬ ಸಿದ್ಧಾಂತವೇ ಅಂಬೇಡ್ಕರ್ ಸಿದ್ಧಾಂತ" ಎಂದು ಅಂಬೇಡ್ಕರ್ ಜಯಂತಿಯನ್ನು ನೆನಪಿಸಿಕೊಂಡರು.
ಮಹದೇವಪ್ಪ ಅವರು ತಮ್ಮ ಮಗ ಸುನಿಲ್ ಬೋಸ್ ಅವರಿಗೆ ತಮ್ಮ ಟಿ ನರಸಿಪುರ ಕ್ಷೇತ್ರವನ್ನು ಬಿಟ್ಟುಕೊಟ್ಟು, ತಾವು ಬೆಂಗಳೂರಿನ ಸಿವಿ ರಾಮನ್ ನಗರದಿಂದ ಸ್ಪರ್ಧಿಸುತ್ತಾರೆ, ಈ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಹೈಕಮಾಂಡ್ ಶಾಸಕರ ಮಕ್ಕಳಿಗೆ ಟಿಕೇಟ್ ನೀಡಲು ಮನಸ್ಸು ಮಾಡದಿರುವುದರಿಂದ ಅವರ ನಡೆ ಬದಲಾಗಿದೆ ಎನ್ನಲಾಗಿದೆ. ಏ.14 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಯಾರ್ಯಾರಿಗೆ ಯಾವ್ಯಾವ ಕ್ಷೇತ್ರ ಎಂಬ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ.