ಶಾಸಕ ರಾಮದಾಸ್ ಗೆ ಹೃದಯಾಘಾತ; ಮಾಹಿತಿ ನೀಡಿದ ವೈದ್ಯರು
ಮೈಸೂರು, ಫೆಬ್ರವರಿ 11: "ಶಾಸಕ ಎಸ್.ಎ.ರಾಮದಾಸ್ ಆರೋಗ್ಯವಾಗಿದ್ದಾರೆ. ಇನ್ನು 2-3 ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಶ್ರೀಕಾಂತ್ ಉಡುಪ.
ನಿನ್ನೆ ಮಧ್ಯರಾತ್ರಿ ರಾಮದಾಸ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು.
ಈ ಕುರಿತು ಮಾಹಿತಿ ನೀಡಿದ ವೈದ್ಯ ಶ್ರೀಕಾಂತ್ ಉಡುಪ, "ರಾತ್ರಿ 2.15 ಸುಮಾರಿನಲ್ಲಿ ಅವರಿಗೆ ಹೃದಯಾಘಾತ ಆಗಿತ್ತು. ಆಸ್ಪತ್ರೆಗೆ ಬಂದ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಗಿದೆ. ರಾಮದಾಸ್ ಅವರಿಗೆ ಸುಮಾರು ಆರು ತಿಂಗಳಿಂದ ತಲೆ ನೋವು ಇತ್ತು. ಜತೆಗೆ ಮಧುಮೇಹ ಕೂಡ ಇದೆ. ಎರಡಕ್ಕೂ ಅವರು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು" ಎಂದು ಹೇಳಿದ್ದಾರೆ.
"ನಮ್ಮ ವೈದ್ಯಕೀಯ ನಿಯಮಗಳ ಪ್ರಕಾರ, ಸ್ಟಂಟ್ ಅಳವಡಿಸಿದ ಬಳಿಕ ಒಂದು ವರ್ಷದವರೆಗೆ ಮಾತ್ರೆ ಸೇವನೆ ಮಾಡಬೇಕಾಗುತ್ತೆ. ಅದರ ಹೊರತಾಗಿ ಬೇರೆ ಯಾವುದೇ ತೊಂದರೆ ಇಲ್ಲ. ಅವರ ಆಪ್ತರು, ಬೆಂಬಲಿಗರು ಆತಂಕಪಡುವ ಅಗತ್ಯವಿಲ್ಲ" ಎಂದಿದ್ದಾರೆ.