ಮೈಸೂರು ಜಿಲ್ಲೆಯ ಪೌರ ಕಾರ್ಮಿಕರ ಕನಿಷ್ಠ ವೇತನದಲ್ಲಿ ಹೆಚ್ಚಳ: ಸಿಇಒ
ಮೈಸೂರು, ಆಗಸ್ಟ್, 04: ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಕನಿಷ್ಠ ವೇತನವನ್ನು 16, 019 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ತಿಳಿಸಿದರು.
ಕರ್ನಾಟಕ ಪೌರಕಾರ್ಮಿಕರ ಸಂಘ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಪೌರ ಕಾರ್ಮಿಕರ ಕುಂದು ಕೊರತೆ ಆಲಿಸಲು ಸಭೆಯನ್ನು ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಮಾತನಾಡಿದ ಬಿ.ಆರ್.ಪೂರ್ಣಿಮಾ ಅವರು ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸರ್ಕಾರದಿಂದ ಆದೇಶವಿದೆ. ಅದನ್ನು ಯಾರೂ ಮೀರುವಂತಿಲ್ಲ. ಸರ್ಕಾರ ಜುಲೈ 28ರಂದು ಪೌರಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನವನ್ನು 14,991 ರೂಪಾಯಿಯಿಂದ 16,019 ರೂಪಾಯಿ ವರೆಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಹೀಗಾಗಿ ಈ ತಿಂಗಳಿನಿಂದ ಹೊಸ ಕನಿಷ್ಠ ವೇತನ ಅನ್ವಯವಾಗಲಿದೆ. ಅದರಂತೆ ಕ್ರಮವಹಿಸಲು ಎಲ್ಲಾ ತಾಲೂಕು ಇಒಗಳಿಗೆ ಸೂಚನೆ ನೀಡಲಾಗುವುದು ಎಂದರು.
ಈ ಬಗ್ಗೆ ಕರ್ನಾಟಕ ಪೌರಕಾರ್ಮಿಕರ ಸಂಘ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ, "ಜಿಲ್ಲೆಯ 256 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 323 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ವೇತನ 12,000 ರೂಪಾಯಿ ನೀಡಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಒಂದೊಂದು ಪಂಚಾಯಿತಿಯಲ್ಲಿಯೂ ವಿಭಿನ್ನ ರೀತಿಯ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸಬೇಕು," ಎಂದು ಮನವಿ ಮಾಡಿದ್ದರು.
ಖಾಲಿ ಹುದ್ದೆಗೆ ಶೀಘ್ರವೇ ನೇಮಕ:
ಸರ್ಕಾರ ಇತ್ತೀಚೆಗೆ ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಟ್ಟದಲ್ಲಿ ಆಯ್ಕೆ ಮಾಡಲು ಅವಕಾಶ ನೀಡಿದೆ. ಅದರಂತೆಯೇ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಪೌರ ಕಾರ್ಮಿಕರು, ವಾಟರ್ಮೆನ್ ಸೇರಿದಂತೆ ಇನ್ನಿತರ ಹುದ್ದೆಗಳು ಖಾಲಿ ಇರುವ ಪಟ್ಟಿಯನ್ನು ತರಿಸಿಕೊಳ್ಳಲಾಗುತ್ತಿದೆ. ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಸಿಇಒ ಪೂರ್ಣಿಮಾ ತಿಳಿಸಿದರು.
ಅವೈಜ್ಞಾನಿಕ ನಿಯಮಾವಳಿ ಕೈಬಿಡಿ:
ಜಿಲ್ಲೆಯಲ್ಲಿ 323 ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 95 ಮಂದಿಗೆ ಮಾತ್ರ ಅನುಮೋದನೆ ದೊರೆತಿದೆ. ಇನ್ನುಳಿದ 228 ಮಂದಿ ಉದ್ಯೋಗ ಅಭದ್ರತೆಯಲ್ಲಿಯೇ ಕೆಲಸ ಮಾಡುವಂತಾಗಿದೆ. ಪೌರ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆ ಹಳೆಯದಾಗಿರುವುದರಿಂದ ಅದರಲ್ಲಿ ಸಾಕಷ್ಟು ಲೋಪದೋಷಗಳಿಗಳಿವೆ. ಬದಲಾದ ಸಂದರ್ಭಕ್ಕೆ ಅದನ್ನು ಬದಲಿಸಬೇಕಿದೆ. ಈ ಕಾಯ್ದೆಯ ಪ್ರಕಾರ 5,000 ಮಂದಿಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು.
ಪೌರಕಾರ್ಮಿಕರ ಹುದ್ದೆಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ನಿಗದಿಗೊಳಿಸಲಾಗಿದೆ. ಇದರಿಂದ ನಿಜಕ್ಕೂ ಪೌರಕಾರ್ಮಿಕರಾಗಿ ದುಡಿಯುವವರಿಗೆ ಕೆಲಸ ನೀಡಲು ಸಾಧ್ಯವಾಗುವುದಿಲ್ಲ. ಈ ಅವೈಜ್ಞಾನಿಕ ನಿಯಮಗಳನ್ನು ಕೈಬಿಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪೌರ ಕಾರ್ಮಿಕರು ಮನವಿ ಮಾಡಿದರು. ಕೂಡಲೇ ಪತ್ರ ಬರೆದು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಂ ರಾಜು ತಿಳಿಸಿದರು.