ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ಉಸ್ತುವಾರಿ ಸಚಿವರಿಂದಲೇ ಆಕ್ಷೇಪ!
ಮೈಸೂರು, ಏಪ್ರಿಲ್ 14: ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹೆಲಿ ಟೂರಿಸಂ ಪ್ರಾರಂಭಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದು, ಮೈಸೂರಿಗರು ವಿರೋಧಿಸಿರುವ ಯೋಜನೆಗೆ ತಮ್ಮ ಸಮ್ಮತಿ ಇಲ್ಲ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹೆಲಿ ಟೂರಿಸಂ ಪ್ರಾರಂಭಿಸಲು ಮರಗಳನ್ನು ಕಡಿಯುವ ವಿಚಾರಕ್ಕೆ ಮೈಸೂರು ಜನರು ವಿರೋಧದ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಯೋಜನೆಗೆ ನನ್ನ ಸಮ್ಮತಿ ಇಲ್ಲ ಎಂದರು.
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
ಅಲ್ಲದೆ, ನೂರಾರು ಮರಗಳನ್ನು ಕಡಿದು ಹೆಲಿ ಟೂರಿಸಂ ಯೋಜನೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಇದರ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಈ ವಿಚಾರವನ್ನು ಗಮನಿಸಿದ್ದೇನೆ. ಅರಣ್ಯ ಇಲಾಖೆ ಜನರ ತೀರ್ಮಾನ ಕೇಳಲು ಸಭೆ ಕರೆದಿದೆ. ಹೀಗಾಗಿ ಈ ಸಭೆಯ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕುರಿತು ಪ್ರತಿಕ್ರಿಯಿಸಿದ ಅವರು, ಪಾಸಿಟಿವ್ ಹೆಚ್ಚಾಗಿದ್ದರೂ ಮೈಸೂರಿಗೆ ಪ್ರತ್ಯೇಕ ನಿಯಮ ಜಾರಿ ಇಲ್ಲ. ರಾಜ್ಯದ ಬೇರೆ ಜಿಲ್ಲೆಗೆ ಯಾವ ಮಾರ್ಗಸೂಚಿ ಇದೆಯೋ, ಅದೇ ಮಾರ್ಗಸೂಚಿ ಮೈಸೂರಿಗೂ ಅನ್ವಯಿಸುತ್ತದೆ.
ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕ್ರಮ ವಹಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮೈಸೂರಿನ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಬಗ್ಗೆ ತನಿಖೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಲು ಸೂಚಿಸಿದ್ದೇನೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವಿಚಾರವಾಗಿ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.