ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಸಚಿವ ಎಸ್.ಟಿ ಸೋಮಶೇಖರ್
ಮೈಸೂರು, ಅಕ್ಟೋಬರ್ 16: ಅ.17 ರಂದು ನಡೆಯಲಿರುವ ದಸರಾ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಂದು ಅರಮನೆ ಆವರಣಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ, ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಯೋಗ ಕ್ಷೇಮವನ್ನು ಮಾವುತರ ಬಳಿ ವಿಚಾರಿಸಿದರು.
ಕೊರೊನಾ ವೈರಸ್ ಆತಂಕ ಇರುವ ಕಾರಣ ಈ ವರ್ಷ ಸಿಡಿಮದ್ದಿನ ತಾಲೀಮಿನಲ್ಲಿ ಬದಲಾವಣೆ ಮಾಡಲಾಗಿದೆ. ಸಿಡಿಮದ್ದಿನ ತಾಲೀಮಿನ ವೇಳೆ ಇದೇ ಮೊದಲ ಬಾರಿಗೆ ಆನೆಗಳು ಅರಮನೆ ಒಳಗೆ ನಿಂತಿದ್ದವು. ಅರಮನೆಯ ಕೋಟೆ ಮಾರಮ್ಮನ ದೇವಸ್ಥಾನದ ಬಳಿ ಕುಶಾಲತೋಪು ಸಿಡಿಸಲಾಯಿತು. ಈ ಮೂಲಕ ಸಿಡಿಮದ್ದಿನ ಶಬ್ಧವನ್ನು ಆನೆಗಳಿಗೆ ಪರಿಚಯಿಸಲಾಯಿತು.
ಮಾವುತರು, ಕಾವಾಡಿಗಳ ಸಮ್ಮುಖದಲ್ಲಿ ಗಜಪಡೆಗೆ ಕಬ್ಬು ಬೆಲ್ಲ ತಿನ್ನಿಸಿದ ಸಚಿವ ಸೋಮಶೇಖರ್ ಅವರಿಗೆ ಶಾಸಕರಾದ ಎಸ್.ಎ ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಸಾಥ್ ನೀಡಿದರು.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ರಾಜರಾಜೇಶ್ವರಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆಲ್ಲುವುದಕ್ಕೆ ಆಗಲ್ಲ. ಅದಕ್ಕೆ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಚುನಾವಣಾ ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್ಐಆರ್ ಹಾಕುತ್ತಾರೆ. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ಐಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು ಎಂದರು.
ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕುಸುಮಾ ಅವರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದಿರುವ ಡಿ.ಕೆ ಶಿವಕುಮಾರ್, ಸುಮ್ಮನೆ ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.