"ನವೆಂಬರ್ 1ಕ್ಕೆ ಮೈಸೂರು ದಸರಾದ ಪಿನ್ ಟು ಪಿನ್ ಲೆಕ್ಕ ಕೊಡುವೆ''
ಮೈಸೂರು, ಅಕ್ಟೋಬರ್ 27: ನವೆಂಬರ್ 1ರಂದು ಮೈಸೂರು ದಸರಾ ಮಹೋತ್ಸವದ ಪಿನ್ ಟು ಪಿನ್ ಲೆಕ್ಕ ಕೊಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ದಸರಾ ಮಹೋತ್ಸವ ಯಶಸ್ವಿಯಾದ ಹಿನ್ನೆಲೆ ಮೈಸೂರಿನ ಸರ್ಕಾರಿ ಅಥಿತಿ ಗೃಹದಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ""ಈ ಬಾರಿ ಮೈಸೂರು ದಸರಾಗೆ ಒಟ್ಟು 15 ಕೋಟಿ ರುಪಾಯಿ ಅನುದಾನ ಬಂದಿತ್ತು. ಅದರಲ್ಲಿ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕ ಕೊಡಲಾಗುವುದು'' ಎಂದರು.
ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ
ನವೆಂಬರ್ 1 ರವರೆಗೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ದಸರಾ ದೀಪಾಲಂಕಾರ ಉಳಿಯಲಿದೆ. ಕೊರೊನಾ ವಾರಿಯರ್ಸ್ ನಿಂದ ದಸರಾ ಉತ್ಸವ ಉದ್ಘಾಟನೆಯಾಗಿದ್ದು, ಐತಿಹಾಸಿಕ ಸಂಗತಿ ಎಂದು ತಿಳಿಸಿದರು.
ಸರಳ ಸಾಂಪ್ರದಾಯಿಕ ದಸರಾದ 9 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಸೂಚನೆ ಯಶಸ್ವಿಯಾಗಿದೆ. ಜಂಬೂಸವಾರಿಗೆ ಜನರಿಗೆ ಬರೋದು ಬೇಡ ಅಂತ ಹೇಳಿದ್ದನ್ನು ಜನರೂ ಒಪ್ಪಿ ಸಹಕರಿಸಿದ್ದಾರೆ ಎಂದರು.
ಮೈಸೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಧನ್ಯವಾದ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮುಖ್ಯಮಂತ್ರಿಗಳು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ನಾಡಿಗೆ ಶುಭ ಸಂದೇಶ ನೀಡಿದ್ದಾರೆ. ಸ್ಥಳೀಯ ಶಾಸಕರಾದ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಎಲ್ಲರೂ ಸಹಕಾರ ನೀಡಿದ್ದಾರೆ ಹಾಗೂ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.