ಹುಣಸೂರು ಉಪ ಚುನಾವಣೆ; ಫೈನಲ್ ಟಚ್ ನೀಡಿದ ಜಿಲ್ಲಾಡಳಿತ
ಮೈಸೂರು, ಡಿಸೆಂಬರ್ 2: ಹುಣಸೂರು ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಡಿ.5 ರಂದು ನಡೆಯಲಿರುವ ಉಪ ಚುನಾವಣೆಗೆ ಜಿಲ್ಲಾಡಳಿತದಿಂದ ಅಂತಿಮ ಸಿದ್ಧತೆಗಳನ್ನು ಮಾಡಲಾಗಿದೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಕಣದಲ್ಲಿ 10 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಚುನಾವಣೆಗಾಗಿ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಒಟ್ಟು 2,27,974 ಮತದಾರರಿದ್ದು, 1,14,580 ಪುರುಷರು, 1,13,388 ಮಹಿಳಾ ಮತದಾರರು ಮತ್ತು ಇತರೆ 6 ಮತದಾರರಿದ್ದಾರೆ. ಒಟ್ಟಾರೆ ಮತದಾರರ ಪೈಕಿ 2,235 ಮಂದಿ ವಿಶೇಷ ಚೇತನ ಮತದಾರರಿದ್ದಾರೆ. ಡಿ.5ರಂದು ಬೆಳಗ್ಗೆ 7 ರಿಂದ ಸಂಜೆ 6ರವರಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಸಂಜೆ ಬಹಿರಂಗ ಪ್ರಚಾರ ಅಂತ್ಯ
ಭಾರೀ ಕುತೂಹಲ ಕೆರಳಿಸಿರುವ ಹುಣಸೂರು ಉಪ ಚುನಾವಣೆ ಗೆಲುವಿಗಾಗಿ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಉಪ ಚುನಾವಣೆ ಬಹಿರಂಗ ಪ್ರಚಾರ ನಾಳೆ (ಡಿ.3ರಂದು) ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ನಂತರ ಕ್ಷೇತ್ರಕ್ಕೆ ಸಂಬಂಧಪಡದ ರಾಜಕೀಯ ನಾಯಕರು ಕ್ಷೇತ್ರ ತೊರೆಯಬೇಕು. ಕ್ಷೇತ್ರಕ್ಕೆ ಸಂಬಂಧಪಡದವರು ಹುಣಸೂರು ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು.
ಹುಣಸೂರು ಚುನಾವಣೆ: ಬಿಜೆಪಿಯ ಈ 'ನಾಯಕ'ರಿಗೆ ಪ್ರತಿಷ್ಠೆಯ ಪ್ರಶ್ನೆ
ಡಿ.5ರವರೆಗೆ ನಿಷೇಧಾಜ್ಞೆ ಜಾರಿ
ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಮಧ್ಯರಾತ್ರಿವರೆಗೆ ಅನ್ವಯವಾಗುವಂತೆ ಹುಣಸೂರು ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಡಿ.5ರಂದು ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ನಾಳೆ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಚುನಾವಣಾ ವೀಕ್ಷಕರಾಗಿ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ ನೇಮಕವಾಗಿದ್ದಾರೆ ಎಂದರು.
ಮತದಾನಾಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 45 ಕೆಎಸ್ ಆರ್ ಟಿಸಿ ಬಸ್, 3 ಮ್ಯಾಕ್ಸಿಕ್ಯಾಬ್ ಹಾಗೂ 1 ಜೀಪ್ ವ್ಯವಸ್ಥೆ ಮಾಡಲಾಗಿದೆ. ಡಿ.9ರಂದು ಹುಣಸೂರಿನ ಡಿ. ದೇವರಾಜು ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರಕ್ಕೆ 3 ಸುತ್ತಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ದಾಖಲೆ ಇಲ್ಲದ ನಗದು ವಶ
ಹುಣಸೂರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ, ಸೂಕ್ತ ದಾಖಲೆಗಳಿಲ್ಲದೇ ಕೊಂಡೊಯ್ಯುತ್ತಿದ್ದ 2,07,25,300 ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪೈಕಿ ಅಗತ್ಯ ದಾಖಲೆ ಒದಗಿಸಿದ ನಂತರ 2,06,35,300 ರೂ.ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ. ಉಳಿಕೆ 90 ಸಾವಿರಕ್ಕೆ ಯಾವುದೇ ದಾಖಲೆ ನೀಡಿಲ್ಲ. ಅಲ್ಲದೇ 7,24,798 ರೂ. ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. 98,82,000 ರೂ. ಮೌಲ್ಯದ ಪಾಂಪ್ಲೆಂಟ್ಸ್, ಪಾತ್ರೆ, ಸೀರೆ, ದ್ವಿಚಕ್ರ ಮತ್ತು 4 ಚಕ್ರದ ವಾಹನ ಮತ್ತು 4 ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ವಿವರಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಉಪ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಿಎಪಿ ಎಫ್ ಪಡೆ ನಿಯೋಜನೆ ಮಾಡಲಾಗಿದ್ದು, ಪ್ರತಿ ಮತಗಟ್ಟೆಗೂ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ಮೂರು ಸುತ್ತಿನ ಭದ್ರತೆ ನೀಡಲಾಗಿದೆ. ಸಿಎಪಿಎಫ್ ತುಕಡಿಯಿಂದ 1ನೇ ಹಂತದ ಭದ್ರತೆ, ಸಶಸ್ತ್ರ ಮೀಸಲು ಪಡೆಯಿಂದ ಎರಡನೇ ಹಂತದ ಭದ್ರತೆ ಹಾಗೂ ಸ್ಥಳೀಯ ಪೊಲೀಸ್ ಭದ್ರತೆಯಿಂದ 3ನೇ ಹಂತದ ಭದ್ರತೆ ನೀಡಲಾಗುವುದು ಎಂದರು.